ವಿಭಾಗಗಳು
ಕವನಗಳು

ಅಮಾನವೀಯತೆ

boyarrest.JPG

ಮಾನವನಾಚರಿಸುತಿಹ ಹಬ್ಬ
ಅದಕಾಗೆ ಪಶು ಪ್ರಾಣಿಗಳಿಗೆ ತೋರಿಸಿಹ ಸ್ವರ್ಗ
ನಿರ್ದಾಕ್ಷಿಣ್ಯದಿ ಕತ್ತರಿಸಿಹ
ಬಡಪಾಯಿ ಕುರಿಯ ತಲೆಯ,
ಇವನ ಮಕ್ಕಳ ಚಿವುಟಲು ಸಾಕು
ಆಗುವುದಿವನಿಗೆ ನೋವು

ಪಕ್ಕದ ಮನೆಯ ದೀಪವ ತಂದ,
ಬೆಳಗಲು ಇವನ ಮನೆಯ
ಎಣ್ಣೆ ಕಡಿಮೆಯಾಗಿ ಬೆಳಕು ಕುಂದುತಿರಲು
ಸೀಮೆ ಎಣ್ಣೆಯ ಸುರಿದಿಹ ಆ ಬತ್ತಿಗೆ,
ಅದೇ ತನ್ನ ಕರುಳ ಕುಡಿಗೆ ಹೀಗಾಗಲು,
ನೋಡಿ ಅತ್ತು ಕರೆದು ಹೊರಳಾಡುವ ಇವನ ಪರಿಯ

ಬಲಹೀನನ ಮುಂದೆಯಷ್ಟೇ ತೋರಿಸಿಹ
ಇವನ ಉತ್ತರನ ಪೌರುಷ
ಹಸುಳೆಗಳ, ಮಹಿಳೆಯರ ಕತ್ತರಿಸಿಹ
ಮೊಂಡುಗತ್ತಿಯಲಿ ನಿರ್ದಾಕ್ಷಿಣ್ಯದಿ,
ಬಲಾಢ್ಯನು ತನ್ನ ಮೇಲೆ ನಿರ್ಬಂಧ ಹೇರಲು
ಮಿತ್ರರೆಲ್ಲರನು ಕೂಡಿಸಿ ಹೂಡುತಿಹ ವಿಶ್ವಯುದ್ಧ

ಯುದ್ಧ ಖೈದಿಗಳ ಕೈ ಕಾಲು ಕಟ್ಟಿ
ಬಾರಿಸುತಿಹ ಛಡಿಯೇಟು
ಬಾಸುಂಡೆ ಮೇಲೆ ಉಜ್ಜುತಿಹ ಕಲ್ಲು ಉಪ್ಪು
ಆರ್ತನಾದವ ಕೇಳುವವರಿಲ್ಲವೇ ಇಲ್ಲ
ತಾನು ಕಲ್ಲೊತ್ತಿ ಎಡವಲು
ಮಾಡುತಿಹ ದೊಡ್ಡ ರಾದ್ಧಾಂತ

ತನಗೊಂದು ಧರ್ಮ ಪರರಿಗೊಂದು ಧರ್ಮ
ಇದು ಸರಿಯೇ?  ಇದನು ನಾವು ಸಹಿಸಬೇಕೇ?

‍ತಳುಕು ಶ್ರೀನಿವಾಸ ಮೂಲಕ

ನಾನೊಬ್ಬ ಸಾಹಿತ್ಯಾಭಿಲಾಷಿ

ನಿಮ್ಮ ಟಿಪ್ಪಣಿ ಬರೆಯಿರಿ