ಹಳದೀ ಲೋಹ
ಅದರ ಮೇಲೆ ಬೇಡ ಮೋಹ
ಎಷ್ಟು ಹೇಳಿದರೇನಂತೆ
ನನ್ನ ಮನ ಮಾತ ಕೇಳೀತೇ
ಮನದೊಂದು ಮಾತಾದರೇ
ಕರದೊಂದು ಕೃತಿ
ಕೂಡಿಸಿಡುವುದೇ ಕರ್ಮದ ಗತಿ
ಕಳೆದುಹೋಗುವುದೆಂಬ ಭೀತಿ
ಅದಕಾಗೇ ಪೆಠಾರಿಗಳ ಖರೀದಿ
ಮತ್ತದರಮೇಲೆ ಭಾರೀ ಬೀಗ
ಸೊಂಟದಲಿ ಅದರ ಕೀಲಿಕೈ
ಇನ್ಶೂರೆನ್ಸ್, ಲಾಕರ್ಗಳಿಗಾಗಿ ಪರದಾಟ
ಎಲ್ಲರಿಗೂ ಹೊಟ್ಟೆಪಾಡಿನದ್ದೇ ಚಿಂತೆ
ಇಂದಾದರೆ, ನಾಳೆಗೆ, ನಾಡದ್ದಕ್ಕೆ
ಮುಂದಿನ ಪೀಳಿಗೆಗೆ, ಅದರ ಮುಂದದ್ದಕ್ಕೆ
ಎಂಬುದರದ್ದೇ ಚಿಂತೆ
ಒಟ್ಟಿ ಒಟ್ಟಿ ಗುಡ್ಡೇ ಹಾಕುವುದು
ಎಲ್ಲ ಜೀವಿಗಳಿಗೂ ತೋರಿಸಿಹ
ಅನ್ನದ ಹಾದಿ
ಹೊಟ್ಟೆ ತುಂಬುವ ಪರಿ
ಕಳ್ಳನಾದರೇನು?
ನನ್ನಿಂದ ಭಿನ್ನನೇ?
ಅವನೇಕೆ ಮಾಡಿಯಾನು?
ದಾಸರ ದಾಸನಾಗಿ
ಇಂದು ನಾಳೆ ಎಂಬುದರ ಮರೆ
ಇದ್ದುದ ತಿಂದು
ಹೆಚ್ಚಾದುದ ಹಂಚು
ಅದ ನಿನ್ನದಲ್ಲವೆಂದು ತಿಳಿ
ಇಲ್ಲದುದಕೆ ಹಲುಬದಿರು
ಶ್ರೀಹರಿಯ ನೆನೆಯುತಿರು