ವಿಭಾಗಗಳು
ಲೇಖನಗಳು

ವೇದಾಂತ ಸಾರಗಳು

ಎನ್ ಬಾಲಸುಬ್ರಹ್ಮಣ್ಯ ಅವರು ಬರೆದಿರುವ ‘ವೇದಾಂತ ಸಾರಗಳು’ ಎನ್ನುವ ಪುಸ್ತಕದಿಂದ ಆಯ್ದ
ಭಾಗಗಳನ್ನು ನಿಮ್ಮ ಮುಂದೆ ಇರಿಸುತ್ತಿದ್ದೇನೆ

೧೬ನೇ ಶತಮಾನದ ಸದಾನಂದರು ವೇದಾಂತದ ಸಾರಗಳ ಬಗ್ಗೆ ಬರೆಯುತ್ತಾ ಮಾನವನು ಮಾಡಬೇಕಾದ ಕರ್ಮಗಳ ಬಗ್ಗೆ ಹೀಗೆ ತಿಳಿಸಿದ್ದಾರೆ.

ಮಾನವರು ಮಾಡಬೇಕಾದ ಕರ್ಮಗಳನ್ನು ವಿಹಿತ (ಮಾಡಬೇಕಾದದ್ದು) ಮತ್ತು ನಿಷಿದ್ಧ (ಮಾಡಬಾರದ್ದು) ಎಂದು ವಿಭಾಗಿಸಬಹುದು.

ವಿಹಿತ ಕರ್ಮವನ್ನು ಆಚರಿಸುವುದರ ಫಲ ಪುಣ್ಯ. ನಿಷಿದ್ಧ ಕರ್ಮದ ಫಲ ಪಾಪ.

ವಿಹಿತ ಕರ್ಮಗಳನ್ನು ನಿತ್ಯ, ನೈಮಿತ್ತಿಕ, ಕಾಮ್ಯ ಮತ್ತು ಪ್ರಾಯಶ್ಚಿತ್ತ ಎಂದು ನಾಲ್ಕು ಬಗೆಯಾಗಿ ವಿಂಗಡಿಸಬಹುದು. ನಿತ್ಯ ಎಂದರೆ ಆವಶ್ಯಕವಾಗಿ ಮಾಡಬೇಕಾದ ಕೆಲಸ, ಸಂಧ್ಯಾವಂದನೆ ಮುಂತಾದವುಗಳು. ಇದರ ಫಲ ಚಿತ್ತ ಶುದ್ಧಿ. ನೈಮಿತ್ತಿಕ ಎಂದರೆ ಕೆಲವು ನಿಮಿತ್ತಗಳಾದ ಮಾಡಲೇಬೇಕಾದ ಕಾರ್ಯಗಳು. ಮಕ್ಕಳು ಹುಟ್ಟಿದಾಗ ಮಾಡುವ ಜಾತಕರ್ಮ, ಮಕ್ಕಳು ಪ್ರಾಪ್ತ ವಯಸ್ಸಿಗೆ ಬಂದಾಗ ಮಾಡಬೇಕಾದ ವಿವಾಹ ಇತ್ಯಾದಿ. ಕಾಮ್ಯ ಎಂದರೆ ಯಾವುದಾದರೂ ಕೆಲಸ ಆಗಲಿ ಎಂಬ ಇಚ್ಛೆಯಿಂದ ಮಾಡುವುದು. ದೇವರ ವಿಶೇಷ ಪೂಜೆ, ವ್ರತ, ಯಜ್ಞ ಯಾಗಾದಿಗಳನ್ನು ಈ ಗುಂಪಿಗೆ ಸೇರಿಸಬಹುದು. ಕರ್ಮಗಳು ಪುರುಷಾಯತ್ತವಾದುದರಿಂದ ಅವನ್ನು ಮಾಡುವಾಗ ಮಾನವ ಸಹಜವಾದ ಯಾವುದಾದರೂ ಕೆಲವು ದೋಷಗಳು ಸಂಭವಿಸಬಹುದು. ಇದರ ನಿವಾರಣೆಗಾಗಿ ಮಾಡುವುದೇ ಪ್ರಾಯಶ್ಚಿತ್ತಗಳು.

ಕರ್ಮಾನುಷ್ಟಾನವು ಸಫಲವಾಗಿ ಚಿತ್ತದ ಶುದ್ಧಿ ಏಕಾಗ್ರತೆಗಳು ಒದಗಿದುದಕ್ಕೆ ಸಾಕ್ಷಿಯಾಗಿ ವ್ಯಕ್ತಿಯಲ್ಲಿ ತೇಜಸ್ಸಿನಂತಹ ಪ್ರವೃತ್ತಿಗಳು ಕಾಣಿಸಿಕೊಳ್ಳುತ್ತವೆ. ಅವು ಕಾಣುವವರೆಗೂ ಕರ್ಮೋಪಾಸನೆಗಳನ್ನು ಮಾಡುತ್ತಿರಬೇಕು. ಇದನ್ನು ಸಾಧನ ಚತುಷ್ಟಯ ಎಂದು ಶಾಸ್ತ್ರಕಾರರು ನಾಲ್ಕು ವಿಭಾಗವನ್ನಾಗಿಸಿದ್ದಾರೆ. ಅವು ಯಾವುವೆಂದರೆ – ನಿತ್ಯಾನಿತ್ಯವಸ್ತು ವಿವೇಕ, ಇಹಾಮುತ್ರಾರ್ಥ ಫಲ ಭೋಗವಿರಾಗ, ಶಮಾದಿ ಸಾಧನ ಸಂಪತ್ತು ಮತ್ತು ಮುಮುಕ್ಷತ್ವ.

ನಿತ್ಯಾನಿತ್ಯವಸ್ತು ವಿವೇಕ – ವಸ್ತುಗಳಲ್ಲಿ ಯಾವುದು ನಿತ್ಯ, ಅನಿತ್ಯ, ಸತ್ಯ, ಅಸತ್ಯ, ಶಾಶ್ವತ, ನಶ್ವರ, ಸ್ಥಿರ, ಕ್ಷಣಿಕ ಎಂಬ ವಿವೇಚನೆ.

ಇಹಾಮುತ್ರಾರ್ಥ ಫಲ ಭೋಗವಿರಾಗ – ಇಹ ಲೋಕ ಮತ್ತು ಪರ ಲೋಕಗಳ ಸುಖಗಳಲ್ಲಿ ಆಸೆಯಿಲ್ಲದಿರುವುದು.

ಶಮಾದಿ ಸಾಧನ ಸಂಪತ್ತು – ಮನಸ್ಸು ಮತ್ತು ಬಾಹ್ಯೇಂದ್ರಿಯಗಳ ನಿಗ್ರಹರೂಪವಾದ ಶಮ ಮತ್ತು ದಮ. ಬಾಹ್ಯ ವಿಷಯಗಳಲ್ಲಿ ಎಲ್ಲ ಆಸಕ್ತಿಯನ್ನೂ ತ್ಯಜಿಸಿದುದರಿಂದ ಹುಟ್ಟುವ ಮನಶಾಂತಿ ರೂಪವಾದ, ಅಥವಾ ಹಾಗೆ ತ್ಯಜಿಸಿದವನು ಸ್ವೀಕರಿಸುವ ಸನ್ಯಾಸಾಶ್ರಮ ರೂಪವಾದ ಉಪರತಿ, ಬಿಸಿಲು, ಛಳಿ ಮೊದಲಾದ ದ್ವಂದ್ವವನ್ನು ಸಹಿಸುವ ತಿತಿಕ್ಷೆ.

ಮುಮುಕ್ಷತ್ವ – ಮೋಕ್ಷವನ್ನು ಪಡೆಯಬೇಕೆಂಬ ಆಸೆ.

ತತ್ವ ಶಾಸ್ತ್ರದ ವಿಷಯ ತತ್ವ, ಪ್ರಮಾಣ, ಯುಕ್ತಿಗಳ ಮೂಲಕ ವಿಚಾರ ವಿಮರ್ಶೆ ಮತ್ತು ಅದರ ಸಾಧನೆ. ಅದರ ಗುರಿ ಜ್ಞಾನ ಮತ್ತು ಅನುಭವ. ಆ ಜ್ಞಾನದಿಂದ ಒದಗುವ ಲಾಭ ಅದರ ಫಲ. ತತ್ವ ಎಂದರೆ ಸ್ವರೂಪ. ವಸ್ತು ಒಂದರ ನಿಜವಾದ ಸ್ವಾಭಾವಿಕವಾದ ರೂಪ. ಆ ಸ್ವರೂಪವನ್ನು ಅರಿಯುವುದರ ಉದ್ದೇಶ ಯಾವುದೋ ಒಂದು ಆಕಾಂಕ್ಷೆಯ ತೃಪ್ತಿ ಮತ್ತು ಪುರುಷಾರ್ಥದ ಲಾಭ. ಆ ಆಕಾಂಕ್ಷೆ ಕ್ಷಣಿಕವಾದ ಐಹಿಕ ಸುಖವಾಗಬಹುದು, ಚಿರಕಾಲದ ಸ್ವರ್ಗಭೋಗವಾಗಬಹುದು ಅಥವಾ ಶಾಶ್ವತವಾದ ಮೋಕ್ಷಾನಂದವಾಗಬಹುದು. ಆದರೆ ಅದರ ಸಾಧನೆ ಮಾತ್ರ ಒಂದೇ – ತತ್ವಜ್ಞಾನ.

ವಿಚಾರಕ್ಕೆ ಅನುಭವಕ್ಕೆ ಗೋಚರವಾಗುವ ಶಾಸ್ತ್ರಗಳ ಎಲ್ಲವೂ ವಿಷಯಗಳಾಗಿರುತ್ತವೆ. ತತ್ವ ಶಾಸ್ತ್ರಕ್ಕೂ ಅದೇ ತರಹದ ವಿಷಯಗಳೇ. ಇತರ ಶಾಸ್ತ್ರಗಳು ವಸ್ತುಗಳನ್ನು ಯಾವುದೋ ವಿಶಿಷ್ಟ ಕೋನಗಳಿಂದ ಪರೀಕ್ಷಿಸಿ ಅವುಗಳ ಪಾಕ್ಷಿಕ ಸ್ವರೂಪವನ್ನು ನಿರೂಪಿಸುತ್ತವೆ. ಆದರೆ ತತ್ವಶಾಸ್ತ್ರ ಅವುಗಳನ್ನು ಎಲ್ಲ ಕೋನಗಳಿಂದಲೂ ಪರಿಶೀಲಿಸಿ ಅವುಗಳ ಪೂರ್ಣ ರೂಪವನ್ನು ನಿರ್ಣಯಿಸುತ್ತದೆ. ಈ ದೃಷ್ಟಿಯಲ್ಲಿ ಇತರ ಶಾಸ್ತ್ರಗಳು ಆಂಶಿಕ ಪುರುಷಾರ್ಥ ಸಾಧಕಗಳಾದರೆ ತತ್ವಶಾಸ್ತ್ರ ಸಕಲಪುರುಷಾರ್ಥ ಸಾಧಕವಾಗಿದೆ. ಆದ್ದರಿಂದಲೇ ವಿದ್ಯೆಗಳಲ್ಲೆಲ್ಲಾ ಶ್ರೇಷ್ಟವಾದುದು ಅಧ್ಯಾತ್ಮ ವಿದ್ಯೆ.

ಪದಾರ್ಥಗಳನ್ನು ಅವುಗಳಲ್ಲಿ ಕಂಡುಬರುವ ಸದೃಶ ಗುಣಗಳ ಆಧಾರದ ಮೇಲೆ ವರ್ಗೀಕರಿಸುವುದು ಸಾಮಾನ್ಯ ವಿಧಾನ. ಈ ದೃಷ್ಟಿಯಿಂದ ಜಗತ್ತನ್ನು ನೋಡಿದಾಗ ಅದು ನಾನಾ ಬಗೆಯ ಅಸಂಖ್ಯಾತ ಭಿನ್ನ ಭಿನ್ನ ಸ್ವತಂತ್ರ ವಸ್ತುಗಳಿಂದ ಕೂಡಿರುವಂತೆ ಕಂಡರೂ ಸೂಕ್ಷ್ಮವಾಗಿ ಪರಿಶೀಲಿಸಿದಲ್ಲಿ ಅದು ಕೆಲವೇ ಪದಾರ್ಥಗಳಿಂದ ಅಥವಾ ಅವುಗಳ ವಿವಿಧ ಸಂಯೋಗಗಳಿಂದ ರಚಿತವಾಗಿರುವುದು ಕಂಡುಬರುತ್ತದೆ. ಹೆಸರು, ಆಕಾರ, ಕಾರ್ಯ ಫಲದಿಂದ, ಮಣ್ಣು, ಕಲ್ಲು, ಮರ ಮುಂತಾದವು ಪರಸ್ಪರ ಭಿನ್ನವಾಗಿದ್ದರೂ ಅವೆಲ್ಲವೂ ಪೃಥ್ವಿಯಿಂದ ರಚಿತವಾಗಿವೆ. ಆದ್ದರಿಂದ ಅವನ್ನು ಸ್ವತಂತ್ರ ಪದಾರ್ಥಗಳು ಅಥವಾ ಪೃಥಿವಿ ಇಂದ ರಚಿತವಾದುದು ಎನ್ನುವುದಕ್ಕಿಂತ ಅವೆಲ್ಲವೂ ಒಂದೇ ಪೃಥ್ವಿಯ ವಿಭಿನ್ನ ಪ್ರಕಾರಗಳು ಅಥವಾ ರೂಪಗಳು ಎನ್ನುವುದು ಯುಕ್ತ. ಇದೇ ರೀತಿ ಜಗತ್ತಿನಲ್ಲಿ ಇನ್ನೂ ನಾಲ್ಕು ಪದಾರ್ಥಗಳನ್ನು ಗುರುತಿಸಬಹುದು. ಅವು ಜಲ, ತೇಜಸ್ಸು (ಸೂರ್ಯ), ವಾಯು ಮತ್ತು ಆಕಾಶ. ಇವೆಲ್ಲವುಗಳ ನಡುವೆಯೂ ಒಂದು ಸಮಾನ ಗುಣವಿದೆ. ಇವೆಲ್ಲವೂ ಜಡ ಅಥವಾ ಅಚೇತನ. ಈ ಜಡವನ್ನು ಅಜ್ಞಾನ, ಮಾಯಾ, ಪ್ರಕೃತಿ ಎಂದು ಕರೆದು ಅವು ಪಾರಮಾರ್ಥಿಕವಾಗಿ ಸತ್ಯವಲ್ಲ ಎನ್ನುವರು. ಶರೀರ ಜಗತ್ತಿನ ಒಂದು ಅಂಶವಾದುದರಿಂದ ಅದೂ ಜಗತ್ತಿನಂತೆಯೇ ಮಿಥ್ಯೆ. ಆದರೆ ಚೈತನ್ಯ ಶಾಶ್ವತವಾದ ಸತ್ಯ ವಸ್ತು. ಆದ್ದರಿಂದ ಅವೆರಡರ ಸಂಬಂಧ ವಸ್ತು ಭೂತವಾಗಲಾರದು. ಜೀವದ ನಿಜವಾದ ಸ್ವರೂಪ ಶುದ್ಧ ಚೈತನ್ಯ. ಅದು ಸತ್ಯ, ನಿತ್ಯ, ಅಖಂಡ, ವಿಭು, ಆನಂದಾತ್ಮಕವೂ ಆಗಿದೆ ಎಂದು ಶೃತಿ ನಿರೂಪಿಸುತ್ತದೆ.

ಬ್ರಹ್ಮ ಒಂದೇ ಸತ್ಯ ಎಂಬ ವೇದಾಂತದ ಪ್ರತಿಪಾದನೆಯು ನಮಗೆ ಬ್ರಹ್ಮದ ವಿಷಯದಲ್ಲಿ ಪರೋಕ್ಷವಾದ, ಶಾಬ್ದಿಕವಾದ ವರ್ಣನೆ ನೀಡುತ್ತದೆ. ಇದು ಒಂದು ದೃಢವಾದ ಬೌದ್ಧಿಕ ಸಿದ್ಧಾಂತವನ್ನು ಒದಗಿಸಲು ಸಾಕಾದರೂ ವೇದಾಂತದ ಗುರಿಯಾದ ಮುಕ್ತಿಯನ್ನು ನೀಡಲು ಇದಿಷ್ಟೇ ಸಾಲದು. ಏಕೆಂದರೆ, ಅಪರೋಕ್ಷವಾದ ಅನುಭವಾವಸಾನವಾದ ಬ್ರಹ್ಮ ಜ್ಞಾನ ಅವಿದ್ಯೆಯ ನಿವರ್ತಕೆ ಮತ್ತು ಮೋಕ್ಷದ ಸಾಧನವೇ ವಿನಾ ಅದರ ಪರೋಕ್ಷ ಶಬ್ದ ಜ್ಞಾನವಲ್ಲ.

ಆತ್ಮದರ್ಶನಕ್ಕೆ ಶ್ರವಣ, ಮನನ, ನಿದಿಧ್ಯಾಸನಗಳು ಸಾಧನವಾಗಿವೆ.

ಶ್ರವಣ ಎಂದರೆ ಎಲ್ಲ ವೇದಾಂತ ವಾಕ್ಯಗಳ ತಾತ್ಪರ್ಯಾರ್ಥಗಳನ್ನು ವಿಚಾರಪೂರ್ವಕವಾಗಿ ಗ್ರಹಿಸುವುದು. ವೇದಾಂತ ವಾಕ್ಯ ಎಂದರೆ ಕೇವಲ ಉಪನಿಷತ್ತುಗಳು ಆಗಿರದೇ, ಇತರ ಶಾಸ್ತ್ರಗಳೂ ಅದರಲ್ಲಿ ಸೇರಿವೆ ಮತ್ತು ಅವುಗಳ ತಾತ್ಪರ್ಯವೂ ವೇದಾಂತದ ತಾತ್ಪರ್ಯವೇ. ಶ್ರವಣದಿಂದ ಆತ್ಮದ ಅಸ್ತಿತ್ವ ಮತ್ತು ಸ್ವರೂಪದ ಬಗ್ಗೆ ಯಾವುದಾದರೂ ಪ್ರಮಾಣ ಇದೆಯೇ ಎಂಬ ಸಂದೇಹ ನಿವಾರಣೆ ಆಗುವುದು.

ಮನನ ಎಂದರೆ ತಾರ್ಕಿಕ ಚಿಂತನೆ. ಶ್ರವಣವು ವೇದಾಂತ ವಾಕ್ಯದ ವಿಚಾರವಾದರೆ ಮನನವು ಅದರ ಅರ್ಥದ ಚಿಂತನೆ. ಈ ಅರ್ಥ ಯುಕ್ತಿಯುಕ್ತವಾಗಿದೆಯೇ, ತರ್ಕಬದ್ಧವಾಗಿದೆಯೇ, ನ್ಯಾಯಸಮ್ಮತವಾಗಿದೆಯೇ, ಲೋಕಾನುಭವಕ್ಕೆ ಅನುಗುಣವಾಗಿದೆಯೇ ಎಂಬುದರ ಆಲೋಚನೆಯೇ ಮನನ. ಜಗತ್ತಿನಲ್ಲಿ ಶಾಸ್ತ್ರವೆನಿಸಿರುವುದು ವೇದಾಂತವೊಂದೇ ಅಲ್ಲ. ಸಾಂಖ್ಯ, ನ್ಯಾಯ, ಮೀಮಾಂಸ ಮುಂತಾದ ಅನೇಕ ಶಾಸ್ತ್ರಗಳಿವೆ.

ನಿಧಿಧ್ಯಾಸನ ಎಂದರೆ ಧ್ಯಾನ. ಒಂದು ವಿಷಯದ ಬಗ್ಗೆ ಮನಸ್ಸಿನ ಏಕರೂಪವಾದ ಅವಿಚ್ಛಿನ್ನ ವೃತ್ತಿ. ಶ್ರವಣದಿಂದ ದೊರೆತ ತತ್ವ, ಮನನದಿಂದ ತರ್ಕಪುಷ್ಟಿ ಪಡೆದರೂ ಅದು ಸಾಕ್ಷಾತ್ಕಾರವಾಗುವುದಿಲ್ಲ. ನಮ್ಮ ಜನ್ಮಾಂತರೀಯ ವಾಸನೆಗಳು, ಅಭ್ಯಾಸದ ರೂಢಿಗಳು ನಮ್ಮ ಮನಸ್ಸು ಏಕಾಗ್ರವಾಗಿ ಆ ವಿಷಯದಲ್ಲಿ ನಿಲ್ಲದಂತೆ ಅಡ್ಡಿ ಮಾಡುತ್ತವೆ. ಇವೇ ವಿಪರೀತ ಭಾವನೆಗಳು. ನಿದಿಧ್ಯಾಸನದಿಂದ ಇವು ನಿವೃತ್ತಿಯಾಗುತ್ತವೆ. ಅನಂತರ ಆತ್ಮಚೈತನ್ಯವು ತಾನಾಗಿಯೇ ಸ್ಫುರಿಸುತ್ತದೆ. ಅದು ಆಗದಿದ್ದಲ್ಲಿ ಸ್ಫುರಿಸುವವರೆಗೂ ನಿದಿಧ್ಯಾಸನವನ್ನು ಮಾಡುತ್ತಲೇ ಇರಬೇಕು.

ವೇದಾಂತದ ಫಲ ಪರಮಪುರುಷಾರ್ಥವಾದ ಮೋಕ್ಷ. ಇದು ಸ್ವರ್ಗದಂತೆ ಒಂದು ಪ್ರದೇಶವಲ್ಲ. ಕಾಲವಿಶೇಷವನ್ನು ಅವಲಂಬಿಸಿಲ್ಲ. ಹೊಸದಾಗಿ ಉತ್ಪನ್ನವಾಗುವುದೂ ಅಲ್ಲ. ಬ್ರಹ್ಮ ರೂಪ ಅದು. ಆದ್ದರಿಂದಲೇ ಆತ್ಮ ರೂಪ ಮತ್ತು ನಿತ್ಯ. ಈ ಕಾಲದಲ್ಲಿಯೇ, ಈ ಲೋಕದಲ್ಲಿಯೇ, ಈ ಶರೀರದಲ್ಲಿಯೇ ಅದು ಸಾಧ್ಯ.

ಜ್ಞಾನವು ಮುಕ್ತಿಯ ಏಕಮಾತ್ರ ಸಾಧನವಾಗಿ ಹೇಳಿರುವುದಿಂದ ಮೋಕ್ಷಕ್ಕೆ ಅಡ್ಡಿಯಾಗಿರುವುದು ಅವಿದ್ಯೆಯೇ ವಿನಹ ಬೇರೆ ಯಾವುದೂ ಅಲ್ಲ. ಅದರ ನಿವೃತ್ತಿಗೆ ಜ್ಞಾನದ ಮಾತ್ರ ಉದಯ ಸಾಕು. ಇನ್ಯಾವ ಕ್ರಿಯಾಂತರವೂ ಬೇಕಾಗಿಲ್ಲ. ವಸ್ತುವು ಸಿದ್ಧವಾಗಿದ್ದು, ಅದಕ್ಕೆ ಪ್ರಮಾಣ ಸಿಕ್ಕಿ, ಕರಣ ನಿರ್ದಿಷ್ಟವಾಗಿದ್ದಲ್ಲಿ ಜ್ಞಾನವು ಅವಶ್ಯವಾಗಿ ತಾನಾಗಿಯೇ ಉದಿಸುತ್ತದೆ.

ಬ್ರಹ್ಮ ಸಾಕ್ಷಾತ್ಕಾರದಿಂದ ಜೀವನ್ಮುಕ್ತನ ಸಕಲ ಕರ್ಮಗಳು ನಾಶವಾದರೂ, ಸಾಕ್ಷಾತ್ಕಾರವಾಗುವ ಮೊದಲೇ ಫಲ ನೀಡಲು ಆರಂಭಿಸಿದ ಪ್ರಾರಬ್ಧ ಕರ್ಮಗಳು ಅವು ಮುಗಿಯುವವರೆಗೂ ಇರುತ್ತವೆ. ಇದರಿಂದ ಜೀವನ್ಮುಕ್ತನಿಗೆ ಶರೀರಧಾರಣ, ಲೋಕವ್ಯವಹಾರ ನಡೆಯುತ್ತಿರುತ್ತದೆ. ಆದರೆ ಇವೆಲ್ಲ ಶರೀರ ಇತ್ಯಾದಿ ಅಭಿಮಾನದಿಂದ ನಡೆಯದೆ ಪ್ರಾರಬ್ಧ ಕರ್ಮವಶಾತ್ ನಡೆಯುವುದರಿಂದ ಜೀವನ್ಮುಕ್ತನಿಗೆ ಇವು ಬಂಧಕವಾಗುವುದಿಲ್ಲ. ಅವರಲ್ಲಿ ಅವಿದ್ಯೆಯ ಆವರಣರೂಪ ನಾಶವಾಗಿ ಕೇವಲ ವಿಕ್ಷೇಪರೂಪ ಮಾತ್ರ ಇರುತ್ತವೆ. ಇದರಿಂದ ಅವನು ಶರೀರ ಯಾತ್ರಾದಿ ಸಕಲ ವ್ಯವಹಾರಗಳನ್ನೂ ಕೇವಲ ಸಾಕ್ಷೀಭೂತನಾಗಿ ನೋಡುತ್ತಿರುತ್ತಾನೆ. ಹೀಗೆ ಅವನು ಎಷ್ಟು ಕಾಲ ಧರಿಸುತ್ತಾನೆ, ಹಾಗೆ ಧರಿಸಲು ಸಾಧ್ಯವೇ ಎಂಬ ಸಮಸ್ಯೆಗಳನ್ನು ಬಾಹ್ಯತರ್ಕದಿಂದ ನಿರ್ಣಯಿಸಲಾಗುವುದಿಲ್ಲ. ಅದು ಜ್ಞಾನಿಯ ಅನುಭವಕ್ಕೆ ಮಾತ್ರ ವೇದ್ಯ. ಶಾಸ್ತ್ರ ಮತ್ತು ಲೋಕ ಅದಕ್ಕೆ ದೃಷ್ಟಾಂತಗಳನ್ನು ಮಾತ್ರವೇ ನೀಡಬಲ್ಲವು.

ಎಲ್ಲ ಆಶ್ರಮದವರಿಗೂ ಜ್ಞಾನಕ್ಕೆ ಅಧಿಕಾರವಿದೆ ಎಂದು ಶಂಕರಾಚಾರ್ಯರು ಹೇಳಿದ್ದಾರೆ.

ವಿಭಾಗಗಳು
ಲೇಖನಗಳು

ಸಾಕ್ರಟೀಸನ ಕೊನೆ – ಪ್ಲೇಟೋವಿನ ಕಣ್ಣಿನಲ್ಲಿ

ಸಾಕ್ರಟೀಸನ ಕೊನೆ – ಪ್ಲೇಟೋವಿನ ಕಣ್ಣಿನಲ್ಲಿ

ಕ್ರಿಸ್ತಪೂರ್ವ ೪೬೯ರಿಂದ ೩೯೯ರವರೆವಿಗೆ ಜೀವಿಸಿದ್ದ ಪ್ರಸಿದ್ಧ ತತ್ವಜ್ಞಾನಿ, ಮೇಧಾವಿ ಸಾಕ್ರಟೀಸ. ಅವನ ತತ್ವಗಳಿಗೆ ವಿರುದ್ಧವಾದ ಸರಕಾರದವರು ಅವನಿಗೆ ಕ್ಷಮಾಪಣೆಯನ್ನು ಕೇಳಲು ಆಗ್ರಹಿಸಿದರು. ಅದಕ್ಕೆ ವಿರೋಧಿಸಿದ ಆತನನ್ನು ಸೆರೆಮನೆಗೆ ತಳ್ಳಲಾಯಿತು. ಅವನನ್ನು ವಿಷವುಣಿಸಿ ಕೊಲ್ಲಲಾಯಿತು. ಆ ಸಮಯದಲ್ಲಿ ಅವನೆದುರು ಅವನ ಶಿಷ್ಯರುಗಳು ಇದ್ದರು. ಆ ಕೊನೆಯ ಸಮಯದಲ್ಲಿ ಸಾಕ್ರಟೀಸನಿದ್ದ ಸೆರೆಮನೆಯಲ್ಲಿ ಪ್ಲೇಟೊ ಮತ್ತಿತರ ಶಿಷ್ಯರೂ ಅವನೊಂದಿಗಿದ್ದರು. ಸಾವಿನ ಬಗ್ಗೆ ಎಳ್ಳಷ್ಟೂ ಉದ್ವೇಗ ತೋರದ ಸಾಕ್ರಟೀಸನ ಬಗ್ಗೆ, ಆತನ ಮೆಚ್ಚಿನ ಶಿಷ್ಯರಲ್ಲೊಬ್ಬನಾದ ಪ್ಲೇಟೋ ಕೊನೆಯ ಕ್ಷಣಗಳನ್ನು ಹೀಗೆ ನಿರೂಪಿಸಿದ್ದಾನೆ. ಆ ಸಮಯದಲ್ಲಿ ಸಾಕ್ರಟೀಸನ ವಯಸ್ಸು ೭೦ ವರುಷಗಳಾದರೆ, ಪ್ಲೇಟೋವಿನ ವಯಸ್ಸು ೨೨.

“ಅವನೆದ್ದು ಕ್ರಿಟೋವಿನೊಂದಿಗೆ ಸ್ನಾನದ ಕೋಣೆಗೆ ಹೋಗುವಾಗ, ಬಾಗಿಲಿನಲ್ಲೇ ನಮ್ಮೆಲ್ಲರಿಗೂ ಕಾಯಲು ತಿಳಿಸಿದನು. ಹಾಗೆ ಕಾಯುವಾಗ ಆ ಮಹಾನ್ ಮನುಷ್ಯನ ಮನದಲ್ಲಿರಬಹುದಾದ ನೋವಿನ ಕ್ಷಣಗಳ ಬಗ್ಗೆ ಯೋಚಿಸಿ, ಚರ್ಚಿಸುತ್ತಿದ್ದೆವು. ಅನಾಥರಾಗುತ್ತಿದ್ದ ನಮ್ಮಂಥ ಹಸುಳೆಗಳನ್ನು ಬಿಟ್ಟು ಹೋಗುತ್ತಿದ್ದ ತಂದೆಯಂತೆ ಗೋಚರವಾಗುತ್ತಿತ್ತು. ಸೂರ್ಯಾಸ್ತದ ಸಮಯ ಸಮೀಪಿಸುತ್ತಿದ್ದಂತೆ, ಆತ ಒಳಗೆ ಬಂದನು. ಮತ್ತೆ ನಮ್ಮೊಡನೆ ಬಂದು ಕುಳಿತವನು ಏನನ್ನೂ ಹೇಳಲಿಲ್ಲ. ಅಷ್ಟು ಹೊತ್ತಿಗೆ ಸೆರೆಮನೆಯಧಿಕಾರಿ ಒಳಗೆ ಬಂದು, ‘ಎಲೈ ಸಾಕ್ರಟೀಸನೇ, ನಿನ್ನನ್ನು ಮಹಾನ್ ಮೇಧಾವಿಯೆಂದೂ, ಸೂಕ್ಷ್ಮಗ್ರಾಹಿಯೆಂದೂ ಮತ್ತು ಇಲ್ಲಿಗೆ ಬಂದವರೆಲ್ಲರಿಗಿಂತಲೂ ಉತ್ತಮ ಮನುಷ್ಯನೆಂದೂ ನಾನು ತಿಳಿದಿರುವೆ, ಇಲ್ಲಿ ಬಂದವರೆಲ್ಲರಲ್ಲೂ ಸರಕಾರಕ್ಕೆ ಮಣಿಯದೇ ಕೋಪ, ಆಕ್ರೋಶ, ತಿರಸ್ಕಾರ ತೋರಿಸಿದವರು. ಇಂತಹವರೆಲ್ಲರನ್ನೂ ವಿಷವುಣಿಸಿ, ಕೊಂದಿರುವೆನು. ಆ ಸಮಯದಲ್ಲಿ ಅವರು ಪ್ರತಿರೋಧ ವ್ಯಕ್ತಪಡಿಸಿದರು. ಆದರೆ ನೀನು ಮಾತ್ರ ಇವರೆಲ್ಲರಿಗೂ ವ್ಯತಿರಿಕ್ತನಾದವನು. ನಿನ್ನಂತಹವನಿಗೂ ನಾನು ವಿಷವುಣಿಸಿ ಕೊಲ್ಲುವ ಕಾಲ ಬಂದಿದೆ, ನಿನಗೆ ಒಳ್ಳೆಯದಾಗಲಿ’, ಎಂದು ಹೇಳಿ ಗಳಗಳನೆ ಅತ್ತು ಹಿಂತಿರುಗಿ ನೋಡದೇ ಹೊರಗೆ ಹೋದನು.

ಅವನತ್ತ ನೋಡಿದ ಸಾಕ್ರಟೀಸನು ಇಂತೆಂದನು, ‘ನಿನಗೂ ಒಳ್ಳೆಯದಾಗಲಿ, ನಿನ್ನ ಕೆಲಸ ನೀನು ಮಾಡುತ್ತಿರುವೆ’. ಮತ್ತೆ ನಮ್ಮ ಕಡೆಗೆ ತಿರುಗಿ, ‘ಎಂತಹ ಒಳ್ಳೆಯ ಮನುಷ್ಯನಾತ, ಪ್ರತಿನಿತ್ಯವೂ ನನ್ನನ್ನು ನೋಡಲು ಬರುತ್ತಾನೆ, ನೋಡಿ ನನ್ನ ಸ್ಥಿತಿಯನ್ನು ನೋಡಿ ಹೇಗೆ ದು:ಖಿಸುತ್ತಿದ್ದಾನೆ. ನಾನು ಬೇಗ ನನ್ನ ಕೆಲಸ ಮುಗಿಸಬೇಕು. ಕ್ರಿಟೋ, ವಿಷವು ತಯಾರಾಗಿದ್ದರೆ ತಾ, ತಯಾರಿಲ್ಲದಿದ್ದರೆ ಬೇಗನೆ ತಯಾರಿಸಿ ತರಲು ತಿಳಿಸು’, ಎಂದನು.

ಅದಕ್ಕೆ ಉತ್ತರವಾಗಿ ಅವನ ಶಿಷ್ಯ ಕ್ರಿಟೋ, ‘ಇನ್ನೂ ಸೂರ್ಯನು ಬೆಟ್ಟದ ಮೇಲಿರುವನು, ಹಲವಾರು ಜನರಿನ್ನೂ ಊಟ ಮಾಡಬೇಕಾಗಿರುವುದು, ಅದಾದ ಮೇಲೆ ಘೋಷಣೆಯಾಗಬೇಕಿದೆ. ಅದರ ನಂತರ ತನ್ನೆಲ್ಲ ಅವಶ್ಯಕತೆಗಳನ್ನು ಪೂರೈಸಿಕೊಂಡು, ವಿಷವುಣಿಸುವವನು ಬರಬೇಕಿದೆ’, ಎಂದನು.

ಸಾಕ್ರಟೀಸನು ಪ್ರತಿಯಾಗಿ, ‘ಸರಿ ಕ್ರಿಟೋ, ಅವರೆಲ್ಲರೂ ಸರಿಯೇ, ಹೀಗೆ ನನಗೆ ಸಮಯ ಕೊಡುವುದು ಸರಿ ಎಂದೆಣಿಸುತ್ತಿದ್ದಾರೆ, ಆದರೆ ಹಾಗೆ ಮಾಡುವುದು ನನಗೆ ಸರಿಯಿಲ್ಲ ಎಂದೆನಿಸುತ್ತಿದೆ. ನಿಧಾನವಾಗಿ ವಿಷ ಕುಡಿಯುವುದರಿಂದ ನಾನೇನನ್ನೂ ಗಳಿಸಿದಂತಾಗುವುದಿಲ್ಲ. ಈಗಾಗಲೇ ಹೋಗಿರುವ ಜೀವವನ್ನು ನಾನು ತಡೆ ಹಿಡಿಯಲಾದೀತೇ, ದಯವಿಟ್ಟು ನಾನು ಹೇಳಿದಂತೆ ಮಾಡು’, ಎಂದನು.

ಈ ಮಾತುಗಳನ್ನು ಕೇಳಿದ ಕ್ರಿಟೋ, ಸೇವಕನಿಗೆ ಸನ್ನೆ ಮಾಡಿದನು. ಆಗ ಸೇವಕನು ಒಳ ಹೋಗಿ ಸ್ವಲ್ಪ ಹೊತ್ತು ನಿಂತಿದ್ದು, ಮರಳಿ ಸೆರೆಮನೆಯಧಿಕಾರಿಯೊಂದಿಗೆ, ವಿಷದ ಪಾತ್ರೆಯನ್ನು ತಂದನು. ಆ ಸೇವಕನನ್ನು ಕುರಿತು ಸಾಕ್ರಟೀಸನು, ‘ನೀನು ನನ್ನ ನೆಚ್ಚಿನ ಸ್ನೇಹಿತ, ಈ ವಿಷಯದಲ್ಲಿ ಹೆಚ್ಚಿನ ಪರಿಣಿತಿ ಪಡೆದಿರುವವನು. ನಾನು ಹೇಗೆ ಮುಂದುವರೆಯಬೇಕೆಂದು ತಿಳಿಸಿಕೊಡು’, ಎಂದು ಕೇಳಿದನು. ಅದಕ್ಕೆ ಉತ್ತರವಾಗಿ ಆ ಸೇವಕನು, ‘ಇದನ್ನು ಕುಡಿದು ಕಾಲು ಸೋಲುವವರೆವಿಗೂ ನೀನು ನಡೆಯುತ್ತಿರಬೇಕು, ನಂತರ ಮಲಗಿಕೋ, ವಿಷ ತನ್ನ ಕೆಲಸವನ್ನು ಮಾಡುವುದು’, ಎಂದು, ವಿಷದ ಪಾತ್ರೆಯನ್ನು ಸಾಕ್ರಟೀಸನ ಕೈಗಿತ್ತನು. ಸ್ವಲ್ಪ ಅಳುಕದ ಸಾಕ್ರಟೀಸನು ಆ ಸೇವಕನ ಕಣ್ಣಲ್ಲಿ ಕಣ್ಣನ್ನಿಟ್ಟು ನೋಡಿ ಪಾತ್ರೆಯನ್ನು ಕೈಗೆತ್ತಿಕೊಂಡು, ‘ಇಂತಹ ನೈವೇದ್ಯವನ್ನು ದೇವರಿಗರ್ಪಿಸುವ ಸಂದರ್ಭ ಬಂದರೆ, ನೀನು ತಯಾರಿರುವೆಯೋ ಅಥವಾ ಇಲ್ಲವೋ’, ಎಂದು ಕೇಳಿದನು. ಅದಕ್ಕಾತನು, ‘ನನ್ನ ಕೆಲಸ ತಯಾರು ಮಾಡಿಕೊಡುವುದಷ್ಟೇ, ಹೆಚ್ಚಿನದೇನೂ ತಿಳಿಯದು’ ಎಂದನು. ಅದಕ್ಕೆ ಸಾಕ್ರಟೀಸನು, ‘ನನಗರ್ಥವಾಯಿತು, ಆದರೂ ನಾನು ಈ ಲೋಕದಿಂದ ಪರಲೋಕಕ್ಕೆ ಮಾಡುವ ಪ್ರಯಾಣ ಸುಖದಾಯಕವಾಗಿರಲೆಂದು ಆ ದೇವರನ್ನು ಪ್ರಾರ್ಥಿಸುವೆ,’ ಎಂದು ಸ್ವಲ್ಪವೂ ಆವೇಶವಿಲ್ಲದೇ, ಆತಂಕವಿಲ್ಲದೇ, ನಗುಮೊಗದಿಂದ ವಿಷದ ಪಾತ್ರೆಯನ್ನು ತುಟಿಗೆ ತಗುಲಿಸಿಕೊಂಡು ಕುಡಿದನು.

ಅಲ್ಲಿಯವರೆವಿಗೆ ನಾವೆಲ್ಲರೂ ತಡೆಹಿಡಿದಿದ್ದ ದು:ಖ ಕಟ್ಟೆಯೊಡೆದಿತ್ತು. ಸಾಕ್ರಟೀಸನು ವಿಷವನ್ನು ಕುಡಿದದ್ದನ್ನು ನೋಡಿ, ಕಣ್ಣೀರನ್ನು ತಡೆಹಿಡಿಯಲಾಗಲಿಲ್ಲ. ನಾನಂತೂ ಮುಖ ಮುಚ್ಚಿಕೊಂಡು ದು:ಖಿಸಿದೆ. ಆದರೆ ಅದು ಆತನ ಸಾವಿನ ಬಗೆಗಿನ ಅಳುವಲ್ಲ, ಅಂತಹ ಮಿತ್ರನನ್ನು ಕಳೆದುಕೊಂಡ ದು:ಖಕ್ಕಾಗಿ. ನಾವೆಲ್ಲರೂ ಆ ಕ್ಷಣದಲ್ಲಿ ಹೇಡಿಗಳಂತೆ ಅತ್ತೆವು. ಶಾಂತನಾಗಿದ್ದ ಸಾಕ್ರಟೀಸನು, ‘ಏನಿದು ವಿಚಿತ್ರವಾದ ಅಳು? ಸಾಯುವವನು ಶಾಂತವಾಗಿ ಸಾಯಬೇಕೆಂದೇ, ಹೆಂಗಸರೆಲ್ಲರನ್ನೂ ನಾನು ಇಲ್ಲಿಂದ ಆಚೆಗೆ ಕಳುಹಿಸಿದೆ, ಈಗ ನೋಡಿದರೆ, ಗಂಡಸರಾದ ನೀವು ಹೆಂಗಸರಂತೆ ಅಳುತ್ತಿರುವಿರಿ. ನೀವುಗಳು ಶಾಂತರಾಗಿರಿ’, ಎಂದನು. ಈ ಮಾತುಗಳನ್ನು ಕೇಳಿ ನಮಗೆಲ್ಲರಿಗೂ ನಾಚಿಕೆಯಾಯಿತು. ಕಣ್ಣೀರನ್ನು ತಡೆಹಿಡಿದೆವು. ಆತನು ಕಾಲು ಸೋಲುವವರೆವಿಗೂ ಮುನ್ನಡೆಯುತ್ತಿದ್ದನು, ನಂತರ ಹಾಗೆಯೇ ಅಂಗಾತ ಮಲಗಿಕೊಂಡನು. ಆಗ ಸೇವಕನು, ಅವನ ಕಾಲುಗಳನ್ನು ಒತ್ತಿ ಹಿಡಿದು, ಅರಿವಾಗುತ್ತಿದೆಯೇ ಎಂದು ಕೇಳಿದನು. ಇಲ್ಲವೆನ್ನಲು ಮೆಲ್ಲ ಮೆಲ್ಲನೆ ಮೇಲಕ್ಕೆ ಒತ್ತಿ ಹಿಡಿದು, ಅರಿವಾಗುತ್ತಿದೆಯೇ ಎಂದು ಕೇಳುತ್ತಿದ್ದನು. ಆಗ ಸಾಕ್ರಟೀಸನು, ‘ವಿಷವು ಹೃದಯವನ್ನು ಮುಟ್ಟಲು ಎಲ್ಲ ಕೊನೆಗೊಳ್ಳುವುದು, ಹೆಚ್ಚಿನ ಶ್ರಮ ತೆಗೆದುಕೊಳ್ಳಬೇಡ’ ಎಂದು ಹೇಳಿದನು. ಕೊನೆಯದಾಗಿ, ಸಾಕ್ರಟೀಸನು ತನ್ನ ಶಿಷ್ಯ ಕ್ರಿಟೋವನ್ನು ಉದ್ದೇಶಿಸಿ, ‘ಕ್ರಿಟೋ, ಅಸ್ಕ್ಲೆಪಿಯಸ್ಸನಿಗೆ ನಾನೊಂದು ಕೋಳಿಯನ್ನು ಕೊಡಬೇಕಿದೆ, ಆ ಸಾಲವನ್ನು ನೀನು ತೀರಿಸುವೆಯಾ?’ ಎಂದು ಕೇಳಿದನು. ಕ್ರಿಟೋ ‘ಆಗಲಿ’, ಎಂದು, ‘ಇನ್ನೇನಾದರೂ ಹೇಳಲು ಇದೆಯೇ’ ಎನ್ನಲು, ಆತನಿಂದ ಉತ್ತರ ಬರಲಿಲ್ಲ. ಪ್ರಪಂಚದಲ್ಲೇ ಮೇಧಾವಿಯಾದ ಇಂತಹ ಮಹಾನ್ ಆತ್ಮವನ್ನು ನಾನೆಂದಿಗೂ ಮತ್ತೆ ನೋಡಲೇ ಇಲ್ಲ”.

ವಿಭಾಗಗಳು
ಲೇಖನಗಳು

ಕೊರೊನ ಹೋರಾಟಗಾರರು – ಬ್ಯಾಂಕರ್ಸ್

ಶ್ರೀಲಕ್ಷ್ಮಿ ಚಿಕ್ಕಂದಿನಿಂದಲೂ ಬಹಳ ಜಾಣೆ. ಆಟ, ಪಾಠ, ಇತರರೊಡನೆ ಬೆರೆಯುವುದು, ಸ್ಪರ್ಧೆಗಳಲ್ಲಿ ಭಾಗವಹಿಸುವುದು ಹೀಗೆ ಎಲ್ಲದರಲ್ಲೂ ಅವಳು ಮುಂದು. ಹಾಗೆಯೇ ಅವೆಲ್ಲದರಲ್ಲೂ ಪ್ರಾವೀಣ್ಯತೆ ಪಡೆದಿದ್ದಳು. 10 ವರ್ಷಗಳ ಹಿಂದೆ, ಉತ್ತಮ ದರ್ಜೆಯಲ್ಲಿ ಪದವಿ ಪಡೆದ ಆಕೆ ಒಂದು ಪ್ರತಿಷ್ಠಿತ ಬ್ಯಾಂಕಿನಲ್ಲಿ ಅಧಿಕಾರಿಣಿಯಾಗಿ ಸೇರಿದಳು. ತನ್ನ ಊರಲ್ಲೇ ಅವಳಿಗೆ ಪೋಸ್ಟಿಂಗ್ ಆಗಿತ್ತು. ಅವಳ ಓದಿಗೆ ಮತ್ತು ಬುದ್ಧಿಶಕ್ತಿಗೆ ಬೇರೆ ಕಡೆಯಲ್ಲಿಯೂ ಒಳ್ಳೆಯ ಮತ್ತು ಹೆಚ್ಚು ಸಂಬಳ ದೊರೆಯುವ ಕೆಲಸ ಸಿಗುತ್ತಿತ್ತು. ಬ್ಯಾಂಕಿನ ಕೆಲಸವಾದರೆ, ನಿಯಮಿತ ಕಾಲಕ್ಕೆ ಹೋಗಿ ಬರುವುದು, ನಿಯಮಿತ ಕಾಲದಲ್ಲಿ ವರಮಾನ ಬರುವುದು, ಬೆಲೆ ಸೂಚ್ಯಂಕದ ಮೇರೆಗೆ ಮೂರು ತಿಂಗಳಿಗೊಮ್ಮೆ ತುಟ್ಟಿಭತ್ಯೆ ಏರುವುದು, ಐದು ವರುಷಗಳಿಗೊಮ್ಮೆ ವೇತನ ಪರಿಷ್ಕರಣೆ ಆಗುವುದು, ದೈಹಿಕ ಶ್ರಮವೂ ಹೆಚ್ಚಿನದಾಗಿರದು, ಇತ್ಯಾದಿ ಸಕಾರಾತ್ಮಕ ವೈಶಿಷ್ಟ್ಯತೆಗಳಿಗಾಗಿ ಬ್ಯಾಂಕ್ ನೌಕರಿಯನ್ನೇ ಆರಿಸಿಕೊಂಡಿದ್ದ್ದಳು.
ಯಾವುದೇ ಕೆಲಸ ಕೊಟ್ಟರೂ ಅಚ್ಚುಕಟ್ಟಾಗಿ, ಹಿರಿಯ ಅಧಿಕಾರಿಗಳಿಗೆ ಸಮಾಧಾನಕರವಾಗಿ ಮಾಡುತ್ತಿದ್ದಳು. ಅಂದಿನ ಕೆಲಸಗಳನ್ನು ಅಂದೇ ಮುಗಿಸಿಯೇ ಮನೆಗೆ ತೆರಳುವುದು ಅವಳ ಪರಿಪಾಠ. ಅದಾದ ಒಂದು ವರ್ಷದಲ್ಲಿ ಮದುವೆಯೂ ಆಗಿ, ನಂತರದ ಎರಡು ವರುಷಗಳಲ್ಲಿ ಒಬ್ಬ ಮಗಳೂ ಹುಟ್ಟಿದಳು.

ಕ್ರಮೇಣ ಬ್ಯಾಂಕಿನಲ್ಲಿ ಕೆಲಸವೂ ಜಾಸ್ತಿ ಆಗುತ್ತಾ ಇತ್ತು, ಹಾಗೆಯೇ ಸರಕಾರದ ನಿಯಮದಂತೆ ನೇಮಕಾತಿ ಆಗುತ್ತಲೇ ಇರಲಿಲ್ಲ ಮತ್ತು ಹೆಚ್ಚು ಹೆಚ್ಚು ಜನರು ವಯೋಗುಣದ ಅನುವಾಗಿ ಮತ್ತು ಸ್ವ-ಇಚ್ಛೆಯಿಂದ ನಿವೃತ್ತರಾಗುತ್ತಿದ್ದರು. ಶ್ರೀಲಕ್ಷ್ಮಿ ತನ್ನ ನಿಯಮದಂತೆ ಪ್ರತಿನಿತ್ಯವೂ ಎಲ್ಲ ಕೆಲಸ ಮುಗಿಸಿಯೇ ಮನೆಗೆ ತೆರಳುತ್ತಿದ್ದಳು. ಅಧಿಕಾರಿಣಿ ಆಗಿ ಸೇರಿದವಳಿಗೆ, ಇನ್ನೂ ಹೆಚ್ಚು ಹೆಚ್ಚು ಪದೋನ್ನತಿ ಪಡೆಯಬೇಕೆಂಬ ಹಂಬಲ ಸ್ವಾಭಾವಿಕವಾಗಿಯೇ ಇತ್ತು. ಹಾಗಾಗಿ, ಬ್ಯಾಂಕಿನಲ್ಲಿ ಹೆಚ್ಚು ಹೆಚ್ಚು ಪ್ರಗತಿ ತೋರಿಸಬೇಕಿತ್ತು. ಪ್ರಗತಿಯನ್ನು ಬ್ಯಾಂಕಿಗೆ ಹೆಚ್ಚಿನ ಲಾಭ ಗಳಿಸುವುದರಲ್ಲಿ ಮತ್ತು ಖರ್ಚು ಕಡಿಮೆ ಮಾಡುವುದರ ಮುಖೇನ ತೋರಿಸಬೇಕಿತ್ತು. ಜಾಣೆ ಬುದ್ಧಿವಂತೆಯಾದ್ದರಿಂದ ಮನೆಯ ಕಡೆಯ ಮತ್ತು ಕೆಲಸದ ಕಡೆಯ ಜೀವನವನ್ನು ಸಮಾನವಾಗಿ ತೂಗಿಸಿಕೊಂಡು ಹೋಗುತ್ತಿದ್ದಳು.

ಯಾರಿಗೂ ಯಾವಾಗಲೂ ಸುಭಿಕ್ಷ ಕಾಲವೇ ಇರೋದಿಲ್ಲ. ಪ್ರಕೃತಿಯ ನಿಯಮದಂತೆ ಒಮ್ಮೆ ಸುಭಿಕ್ಷ ಎದುರಿಸಿದರೆ ಮತ್ತೊಮ್ಮೆ ದುರ್ಭಿಕ್ಷವನ್ನು ಎದುರಿಸಲೇಬೇಕು. ಹಾಗೆಯೇ ನಮ್ಮ ನಾಯಕಿಯಲ್ಲಿಯೂ ದುರ್ಭಿಕ್ಷದ ಕಾಲ ಎದುರಾಯಿತು. ಮೊತ್ತ ಮೊದಲಿಗೆ ಅವಳಿಗೆ ಪ್ರಬಂಧಕಳಾಗಿ (ಮ್ಯಾನೇಜರ್) ಪದೋನ್ನತಿಯಾಗಿದ್ದರಿಂದ, ಬೇರೆ ರಾಜ್ಯದ ಊರಿಗೆ ವರ್ಗಾವಣೆ ಆಯಿತು. ಪತಿಗೂ ಅಲ್ಲಿಗೇ ವರ್ಗ ಮಾಡಿಸಿಕೊಂಡು, ಮಗಳನ್ನೂ ಅಲ್ಲಿಯೇ ಶಾಲೆಗೆ ಸೇರಿಸಿದ್ದಾಯಿತು. ಅಲ್ಲಿಯವರೆವಿಗೆ ಅವಳಿಗೆ ತಿಳಿಯದ, ಶನಿಕಾಟ ಇನ್ನು ಮುಂದೆ ಶುರುವಾಯಿತು.

ಹೊಸ ಜಾಗ, ಹೊಸ ಸಹೋದ್ಯೋಗಿಗಳು, ಹೊಸ ಗ್ರಾಹಕರನ್ನು ಎದುರಿಸಬೇಕಾಯಿತು. ಹೊಸ ಹೊಸದರಲ್ಲಿ ಯಾರೂ ಇನ್ನೊಬ್ಬರನ್ನು ನಂಬುವುದಿಲ್ಲ. ಇದು ಮಾನವ ಸಹಜ ಗುಣ. ಕ್ರಮೇಣ ನಾವೇ ಅವರೊಂದಿಗೆ ಒಗ್ಗಿಕೊಂಡು ಹೋಗಬೇಕು. ಹಾಗೆಯೇ ಇವಳಲ್ಲೂ ಆಗಿತ್ತು.

ಈ ಮೊದಲು ಅಲ್ಲಿದ್ದ ಪ್ರಬಂಧಕ ಕೆಲವು ಅವ್ಯವಹಾರ ಮಾಡಿದ್ದರಿಂದ ಆ ಶಾಖೆಯು ನಷ್ಟ ಅನುಭವಿಸುತ್ತಿತ್ತು. ಹಾಗೆಯೇ ನಿಷ್ಪ್ರಯೋಜಕ ಆಸ್ತಿಗಳೂ (ನಾನ್ ಪರ‍್ಫಾರ‍್ಮಿಂಗ್ ಅಸೆಟ್ಸ್) ಜಾಸ್ತಿ ಆಗುತ್ತಿತ್ತು. ಇಂತಹ ಆಸ್ತಿಗಳಿಂದ ಬ್ಯಾಂಕಿಗೆ ವರಮಾನವೂ ಬರುವುದಿಲ್ಲ ಹಾಗೆಯೇ ಆ ಆಸ್ತಿಗಳಿಗಾಗಿ ಪ್ರಾವಧಾನವನ್ನೂ (ಪ್ರಾವಿಷನ್ಸ್) ಕೂಡಾ ಮಾಡಬೇಕಿತ್ತು. ಹೀಗಾಗಿ ಆ ಶಾಖೆಯು ಲಾಭ ಗಳಿಸುವುದಲ್ಲದೇ ನಷ್ಟವನ್ನೇ ಹೆಚ್ಚು ಹೆಚ್ಚು ಎದುರಿಸಿತ್ತಿತ್ತು. ಈಕೆಗೆ ಇದೆಲ್ಲದರಿಂದ ಹೊರ ಬಂದು ಲಾಭ ಮಾಡುವುದು ಒಂದು ದೊಡ್ಡ ಸವಾಲಾಗಿತ್ತು. ಇದೇ ಸಮಯದಲ್ಲಿ ವಿಶ್ವಕ್ಕೇ ಬಡಿದ ಮಹಾಮಾರಿ ಕೊರೊನಾದ ಕಾಟ ತಟ್ಟುತ್ತಿದೆ. ಸರ್ಕಾರದ ಆಜ್ಞೆಯಂತೆ ಪ್ರತಿನಿತ್ಯವೂ ಬ್ಯಾಂಕಿನ ಶಾಖೆ ಕಾರ್ಯ ನಿರ್ವಹಿಸಬೇಕು. ಈಕೆ ಪ್ರಬಂಧಕಳಾದ್ದರಿಂದ ಪ್ರತಿನಿತ್ಯವೂ ಶಾಖೆಗೆ ಹೋಗಬೇಕು. ಇತರೆ ಅಧಿಕಾರಿ ಯಾ ನೌಕರರು ಕೆಲವೊಮ್ಮೆ ಅನಾರೋಗ್ಯದ ನಿಮಿತ್ತ ರಜೆಯ ಮೇಲೆ ಹೋಗುತ್ತಿದ್ದರು, ಆದರೆ ಈಕೆ ಮಾತ್ರ ಅನಾರೋಗ್ಯವಿದ್ದರೂ ಕೆಲಸಕ್ಕೆ ಹೋಗಲೇಬೇಕಿತ್ತು. ಆ ಶಾಖೆ ಇದ್ದ ಸ್ಥಳದಲ್ಲಿ ಹೆಚ್ಚಿನದಾಗಿ ವಯಸ್ಸಾದವರೇ ವಾಸಿಸುತ್ತಿದ್ದರು. ಅವರಿಗೆಲ್ಲರಿಗೂ ಅದೇ ಶಾಖೆಯಲ್ಲಿ ಪಿಂಚಣಿ ಕೊಡುವ ವ್ಯವಸ್ಥೆ ಆಗಿತ್ತು. ಅವರಲ್ಲಿ ಕೆಲವರಿಗೆ ಮನೆಯಲ್ಲಿ ಕುಳಿತು ಬೇಜಾರೆಂದೂ, ಶಾಖೆಯಲ್ಲಿ ಹವಾನಿಯಂತ್ರಿತ ಮತ್ತು ದಿನಪತ್ರಿಕೆ ಓದುವ ವ್ಯವಸ್ಥೆ ಇದ್ದುದರಿಂದ, ಹೆಚ್ಚಿನ ಸಮಯವನ್ನೆಲ್ಲಾ ಶಾಖೆಯಲ್ಲಿಯೇ ಕಳೆಯುತ್ತಿದ್ದರು. ಸರಕಾರವು ಆಗಾಗ್ಯೆ ಲಾಕ್‍ಡೌನ್ ಮಾಡುತ್ತಿದ್ದುದರಿಂದ ಶಾಖೆಗೆ ಬಂದು ಹೋಗಲು ಸಾರಿಗೆ ವ್ಯವಸ್ಥೆಯೂ ದುಸ್ತರವಾಗಿತ್ತು. ಅದಲ್ಲದೇ ಪೊಲೀಸರ ಕಾಟವೂ ಇಲ್ಲದಿಲ್ಲ. ಮತ್ತೂ ಹೆಚ್ಚಿನದಾಗಿ ಶಾಖೆಯನ್ನು ಪ್ರತಿನಿತ್ಯ ಸ್ಯಾನಿಟೈಸ್ ಮಾಡಬೇಕು, ಬರುವ ಗ್ರಾಹಕರಲ್ಲಿ ಕೆಲವರು ಕೊರೊನಾ ರೋಗ ಪೀಡಿತರಿರಬಹುದು ಮತ್ತು ಅವರು ಶಾಖೆಯ ಸಿಬ್ಬಂದಿಗೆ ರೋಗ ತಗುಲಿಸದಂತೆ ಅವರಿಗೆ ದೂರದಿಂದಲೇ ವ್ಯವಹರಿಸುವಂತೆ ಮನದಟ್ಟು ಮಾಡಿಕೊಡಬೇಕು. ಅದೂ ಅಲ್ಲದೇ ಸರಕಾರವು ಘೋಷಿಸಿದ ಹೆಚ್ಚುವರಿ ಸಾಲಗಳನ್ನು ಗ್ರಾಹಕರಿಗೆ ಕೊಡಲು, ಅವರ ಅರ್ಜಿಗಳನ್ನು ಕೂಲಂಕುಷವಾಗಿ ಪರೀಕ್ಷಿಸಬೇಕು. ಕೆಲವು ಸಲ ಸಾಲ ತೆಗೆದುಕೊಂಡವರು ಸಾಂಕ್ರಾಮಿಕ ರೋಗದ ಹೆಸರಿನಲ್ಲಿ ಮರುಪಾವತಿ ಮಾಡದೆಯೂ ಇದ್ದು ಬ್ಯಾಂಕಿನ ಲಾಭಾಂಶಕ್ಕೆ ಹೊಡೆತ ಉಂಟು ಮಾಡಬಹುದು. ಇಂತಹ ಹಲವು ನಿದರ್ಶನಗಳೂ ಇವೆ.

ಯಾವತ್ತಾದ್ರೂ ಬ್ಯಾಂಕ್ ಮುಚ್ಚಿದೆಯಾ? ಅವರಿಗೆ ವರ್ಕ್ ಫ್ರಂ ಹೋಂ ಸೌಲಭ್ಯ ಕೊಡಬಹುದಾ, ಕೊಟ್ಟಿದ್ದೀವಾ? ಅದನ್ನು ಹೇಗೆ ಮಾಡಬಹುದು ಎಂದರೆ, ಎಲ್ಲಿಯವರೆವಿಗೆ ಬ್ಯಾಂಕಿಗೆ ಹೋಗಿ ಮಾಡುತ್ತಿದ್ದ ಕೆಲಸವನ್ನು ನಾವುಗಳು ಮನೆಯಲ್ಲಿಯೇ ಡಿಜಿಟಲ್ ಬ್ಯಾಂಕಿಂಗ್ ಮೂಲಕ ಯಾಕೆ ಮಾಡಬಾರದು. ಸರಕಾರವೂ ಇದಕ್ಕೆ ಹೆಚ್ಚು ಒತ್ತು ಕೊಡುತ್ತಿದೆ. ಇದು ಸಮಾಜದಲ್ಲಿ ಬಾಳುವ ನಮ್ಮ ಕರ್ತವ್ಯ ಅಲ್ಲವೇ!? ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್, ಆನ್‍ಲೈನ್ ಬ್ಯಾಂಕಿಂಗ್, ಮೊಬೈಲ್ ಬ್ಯಾಂಕಿಂಗ್ ಇತ್ಯಾದಿಗಳ ಮೂಲಕ ಹಣಕಾಸಿನ ವ್ಯವಹಾರವನ್ನು ಬ್ಯಾಂಕಿನ ಶಾಖೆಗೆ ಹೋಗದೆಯೇ ಮಾಡಬಹುದು. ಬ್ಯಾಂಕಿನ ಆಡಳಿತ ಮಂಡಳಿ ಶಾಖೆಗಳನ್ನು ವಿಲೀನಗೊಳಿಸಿ ಕಡಿಮೆ ಸಂಖ್ಯೆಯಲ್ಲಿ ಶಾಖೆಗಳು ವ್ಯವಹಾರ ಮಾಡುವಂತೆ ಮಾಡಬಹುದು. ಇದರಿಂದ ನೌಕರರಿಗೂ ಅನುಕೂಲವಾಗುವುದು.

ಈಗ ಹೇಳಿ, ವೈದ್ಯರು ದಾದಿಯರು ಮತ್ತು ಕೊರೊನಾ ವಿರುದ್ಧ ಹೋರಾಡುತ್ತಿರುವ ಎಲ್ಲರನ್ನೂ ಮೊದಲ ಹಂತದ ಹೋರಾಟಗಾರರು (ಫ್ರಂಟ್ ಲೈನ್ ವಾರಿಯರ್ಸ್) ಎಂದು ಕರೆಯಬಹುದಾದರೆ, ಅವರಂತೆಯೇ ಸೇವೆ ಸಲ್ಲಿಸುತ್ತಿರುವ ಬ್ಯಾಂಕಿನ ಅಧಿಕಾರಿ ಮತ್ತು ನೌಕರರೂ ಕೊರೊನಾ ವಾರಿಯರ್ಸ್ ಅಲ್ಲವೇ? ಫ್ರಂಟ್ ಲೈನ್ ಅಲ್ಲದಿದ್ದರೂ ಸೆಕೆಂಡ್ ಲೈನ್‍ನಲ್ಲಿ ಆದರೂ ಇವರನ್ನು ಇರಿಸಬಹುದಲ್ಲವೇ? ವ್ಯವಹಾರ ಜಗತ್ತಿನಲ್ಲಿ ಅವರ ಪಾತ್ರ ಗಣನೀಯ.

ವಿಭಾಗಗಳು
ಲೇಖನಗಳು

ಕಾಲೋನಿ ಗಣೇಶೋತ್ಸವ

2006ರಲ್ಲಿ ಬರೆದಿದ್ದ ಲೇಖನ – ಮರುಪ್ರಕಟಣೆ

ಏಕದಂತಾಯ ವಿದ್ಮಹೇ ವಕ್ರತುಂಡಾಯ ಧೀಮಹಿ ತನ್ನೋ ದಂತಿ: ಪ್ರಚೋದಯಾತ್.

ಇದು ಗಣೇಶಾಥರ್ವಶೀರ್ಷದಲ್ಲಿ ಬರುವ ಒಂದು ಶ್ಲೋಕ. (ಒಂದು ದಂತ ಉಳ್ಳವನೂ ಬಗ್ಗಿರುವ ಸೊಂಡಿಲಿನವನೂ ಆದ ಆ ಭಗವಂತ ಬುದ್ಧಿಯನ್ನೂ ಮತ್ತು ಸ್ಫೂರ್ತಿಯನ್ನೂ ನೀಡಲಿ ಎಂದರ್ಥ).

ಗಣಪತಿ ಬಾಪ್ಪಾ ಮೋರಿಯಾ
ಪುಡಚ್ಯಾ ವರ್ಷೀ ಲವಕರ್ ಯಾ
ಇದು ಮರಾಠಿಯಲ್ಲಿ ಗಣಪತಿಗಾಗಿ ಹೇಳುವ ಹಾಡು.

ಇದರರ್ಥ, ’ಓ ಗಣಪತಿ ದೇವನೇ ಮುಂದಿನ ವರ್ಷ ಬೇಗ ಬಾ’ ಎಂದು. ಮರಾಠಿ ಭಾಷಿಗರಿಗೆ ಮನೆಯಲ್ಲಿ ಎಂದೂ ಗಣಪತಿ ಇರಲಿ ಎಂಬ ಆಶಯ. ಆದರೇನೂ ಹಬ್ಬದ ದಿನದಿಂದ ಹತ್ತು ದಿನಗಳು ಮಾತ್ರ ಇದ್ದು ನಂತರ ಅನಂತ ಚತುರ್ದಶಿಯ ದಿನ ಆತ ಹೊರಟು ಬಿಡುವನು.
ಅವನ ಮೇಲೆ ಅತಿಯಾದ ಪ್ರೇಮದಿಂದ ಭಕ್ತಾದಿಗಳು ಹಾಡಿ ಹೊಗಳುವರು.

ಮುಂಬಯಿ ಮತ್ತು ಮಹಾರಾಷ್ಟ್ರದಲ್ಲಿ ಎಂತಹ ಅವಘಡವಾದರೂ ಸಾರ್ವಜನಿಕ ಗಣೇಶೋತ್ಸವದ ಕಳೆ ಮಾತ್ರ ಕುಂದುವುದಿಲ್ಲ. ಆದರೆ ಈ ವರ್ಷ ಮಾತ್ರ ಸರಕಾರವು ಕೆಲವು ನಿಬಂಧನೆಗಳ ಮೇರೆಗೆ ಸಾರ್ವಜನಿಕ ಉತ್ಸವವನ್ನು ನಡೆಸಲು ನಿರ್ಧರಿಸಿದೆ. ನಮ್ಮಲ್ಲಿ ಮನೆ ಮನೆಗಳಲ್ಲಿ ಚಿಕ್ಕ ಚಿಕ್ಕ ಗಣಪತಿಗಳನ್ನು ಪೂಜಿಸುವೆವು. ಸಾರ್ವಜನಿಕ ಗಣೇಶೋತ್ಸವ ಅಲ್ಲಲ್ಲಿ ನಡೆಯುವುದು. ಆದರಿಲ್ಲಿ ಸ್ವಾತಂತ್ರ್ಯ ಪೂರ್ವದ ಸಮಯದಲ್ಲಿ (೧೮೯೪) ಜನರನ್ನು ಒಗ್ಗೂಡಿಸಲು ಈ ಉತ್ಸವದ ಆಚರಣೆಯನ್ನು ಬಾಲ ಗಂಗಾಧರ ತಿಲಕರು ಪುಣೆಯಲ್ಲಿ ಪ್ರಾರಂಭಿಸಿದರು. ಅವರ ಕಾರ್ಯದಿಂದ ರಾಷ್ಟ್ರದಲ್ಲಿ ಆ ಕಾಲಕ್ಕೆ ಅವಶ್ಯವಾದ ಜನಬಲವೆಂಬ ಒಂದು ದೊಡ್ಡ ಶಕ್ತಿಯ ನಿರ್ಮಾಣವಾಯಿತು. ಹಾಗೇ ೧೯೦೬ರಲ್ಲಿ ಸ್ವಾತಂತ್ರ್ಯ ಹೋರಾಟದ ವೀರ ಸಹೋದರರಾದ ಗಣೇಶ್ ಮತ್ತು ವಿನಾಯಕ್ ಸಾವರ್ಕರ್ ಅವರುಗಳು ಇದೇ ಸಾರ್ವಜನಿಕ ಗಣೇಶೋತ್ಸವ ಮಂಡಳಿಗಳನ್ನು ಉಪಯೋಗಿಸಿಕೊಂಡು ಬ್ರಿಟಿಷರ ವಿರುದ್ಧ ಸಿಡಿದೇಳುವಂತೆ ಕ್ರಾಂತಿಕಾರಿ ಕೆಲಸಗಳನ್ನು ಮಾಡಿದ್ದರು. ಪುಣೆ ಮಹಾರಾಷ್ತ್ರದ ಸಾಂಸ್ಕೃತಿಕ ರಾಜಧಾನಿ ಎಂದು ಕರೆದರೂ ತಪ್ಪಾಗಲಾರದು. ಅಲ್ಲಿಯ ದಗಡೂ ಶೇಟ್ ಗಣಪತಿ ವಿಶ್ವ ಪ್ರಸಿದ್ಧ.

ಅತಿಯಾದ ಮಳೆಯಿಂದಾದ ಜಲಪ್ರಳಯದ ಹಿಂದೆಯೇ ಸಾಂಕ್ರಾಮಿಕ ರೋಗದ ಭೀತಿ, ಅದರ ಹಿಂದೆಯೇ ಹಳೆಯ ಕಟ್ಟಡಗಳ ಕುಸಿತ ಮತ್ತು ಸಾವಿರಾರು ಜನಗಳ ಸಾವು. ಹೀಗೆ ಒಂದರ ಹಿಂದೊಂದರಂತೆ ಕೆಟ್ಟದ್ದನ್ನೇ ಎದುರಿಸುತ್ತಿರುವ ಮುಂಬಯೀಕರರು ಇವೆಲ್ಲವನ್ನೂ ಕೆಟ್ಟ ಕನಸನ್ನು ಮರೆಯುವಂತೆ ಮರೆತು ಗಣೇಶೋತ್ಸವವನ್ನು ಆಚರಿಸಲು ಪ್ರಯತ್ನಿಸುತ್ತಿರುವುದು ಮಾನವ ಜನಾಂಗಕ್ಕೆ ಒಂದು ದೊಡ್ಡ ನೀತಿ ಪಾಠ. ತಲೆಯ ಮೇಲೆ ಕೈ ಹೊತ್ತು ಕೂರದೇ ಮುನ್ನಡೆಯುವುದರಲ್ಲೇ ಜೀವನ ಎಂಬುದನ್ನು ಸಾಬೀತು ಪಡಿಸುತ್ತಿದ್ದಾರೆ.

ಯಾವುದೇ ದೇವರಿಗೆ ಪೂಜಿಸುವ ಮೊದಲು ಗಣಪನಿಗೆ ಪೂಜಿಸುವ ನಿಯಮವಿದೆ. ಎಲ್ಲ ವಿಘ್ನಗಳನ್ನು ನಿವಾರಿಸುವ ದೈವ ಆದ್ದರಿಂದ ಅವನಿಗೇ ಅಗ್ರ ಪೂಜೆ. ಗಣಪತಿ ತಿಳುವಳಿಕೆ ಮತ್ತು ಅದೃಷ್ಟವನ್ನು ತಂದುಕೊಡುವ ದೈವ. ಆ ಸಿದ್ಧಿ ಬುದ್ಧಿಯರನ್ನೇ ಆತನ ಪತ್ನಿಯರೆಂದೂ ತಿಳಿಯುವೆವು.

ಹತ್ತು ದಿನಗಳು ಮೂರ್ತಿಯನ್ನು ಕುಳ್ಳಿರಿಸಿ ವಿಜೃಂಭಣೆಯಿಂದ ಹಬ್ಬವನ್ನಾಚರಿಸುವರು. ಹತ್ತನೆಯ ದಿನ ಅನಂತಚತುರ್ದಶಿಯೂ ಆಗಿದ್ದು, ಅಂದು ಗಜಾನನ ಮೂರ್ತಿಯನ್ನು ಹತ್ತಿರದ ಕೆರೆ ಕೋಡಿ ಅಥವಾ ಸಮುದ್ರದ ಪಾಲು ಮಾಡುವರು. ಮನೆಗಳಲ್ಲಿ ಚಿಕ್ಕ ಚಿಕ್ಕ ಮೂರ್ತಿಗಳನ್ನೂ ಸೊಸೈಟಿ ಕಾಲೋನಿಗಳಲ್ಲಿ (ಇಲ್ಲೆಲ್ಲಾ ಬಹು ಮಹಡಿ ಕಟ್ಟಡಗಳಿದ್ದು, ಎಲ್ಲರೂ ಸೊಸೈಟಿ ಮಾಡಿಕೊಂಡಿರುವರು), ದೊಡ್ಡ ದೊಡ್ಡ ಗಣಪತಿಗಳನ್ನೂ ಇಟ್ಟು ಪೂಜಿಸುವರು. ಮೂರ್ತಿಯನ್ನು ಹಬ್ಬದ ದಿನದಂದೇ ತರುವರು. ಪ್ಲಾಸ್ಟರ್ ಆಫ್ ಪ್ಯಾರಿಸ್ನಿಂದ ತಯಾರಿಸುತ್ತಿದ್ದ ಮೂರ್ತಿಯಿಂದ ವಾತಾವರಣ ಕಲುಷಿತವಾಗುವುದೆಂದು ಈಗೀಗ ಎಲ್ಲ ಕಡೆಗಳಲ್ಲೂ ಮಣ್ಣಿನ ಮೂರ್ತಿಗೆ ಬೇಡಿಕೆ ಜಾಸ್ತಿಯಾಗಿದೆ. ಜನರು ಗಣಪತಿ ತಯಾರಿಸುವ ಸ್ಥಳಕ್ಕೆ ಬಾಜಾ ಭಜಂತ್ರಿಗಳೊಡನೆ ಗುಂಪು ಗುಂಪಾಗಿ ಹೋಗಿ ಚೌತಿಯಂದೇ (ಹಬ್ಬದ ದಿನ) ಗಣೇಶನ ಮೂರ್ತಿಯನ್ನು ಖರೀದಿಸುವರು. ಇದಕ್ಕಾಗಿ ಮುಂಗಡವಾಗಿ ಬುಕಿಂಗ್ ಮಾಡಿರುವರು. ಅಲ್ಲಿ ಸ್ವಾಮಿಯ ಮೂರ್ತಿಗೆ ಪೂಜೆ ಸಲ್ಲಿಸಿ ಆ ಮೂರ್ತಿ ನಿರ್ಮಿಸಿದವನಿಗೆ ತಾಂಬೂಲ ಸಹಿತ ಹಣ ಕೊಡುವ ಪದ್ಧತಿ ಇದೆ. ನಮ್ಮಲ್ಲಿಯ ಹಾಗೆ ಒಂದು ವಾರದ ಮೊದಲೇ ದೇವರು ಕೊಂಡರೆ ಬೆಲೆ ಕಡಿಮೆ – ಹಬ್ಬದ ದಿನ ಜಾಸ್ತಿ ಎಂಬುದು ಇಲ್ಲಿ ಇಲ್ಲವೇ ಇಲ್ಲ. ಎಲ್ಲ ದಿನಗಳಲ್ಲೂ ಒಂದೇ ಬೆಲೆ. ಮೂರ್ತಿಯನ್ನು ತರುವಾಗ ಅದರ ತಲೆಯ ಮೇಲೆ ಒಂದು ಬಟ್ಟೆ ಹಾಕಿರುವರು ಮತ್ತು ತರುವವರು ತಲೆಗೆ ಬಿಳಿ ಟೊಪ್ಪಿಗೆಯನ್ನು ಧರಿಸಿರುವುದು ವೈಶಿಷ್ಟ್ಯ.
ಮೂರ್ತಿಯ ತಲೆಯ ಮೇಲೆ ಬಟ್ಟೆ ಏಕೆ ಹಾಕುವರೆಂದು ನನಗಿನ್ನೂ ತಿಳಿಯದಾಗಿದೆ. ಕೆಲವರು ಹೇಳುತ್ತಾರೆ ದೇವ ಆಚೆ ಕಡೆಗೆ ನೋಡಬಾರದು – ನೋಡಿದ್ರೆ ಓಡಿ ಹೋಗ್ತಾನೆ ಅಂತ. ದೇವರನ್ನು
ಹಿಡಿದಿಡುವಷ್ಟು ಶಕ್ತಿ ನಮ್ಮಲ್ಲಿದೆಯೇ? ಆ ದೇವರು ಯಾರು ಅನ್ನೋದೇ ತಿಳಿದುಕೊಳ್ಳಕ್ಕೆ
ಇನ್ನೂ ಆಗಿಲ್ಲ. ಆದರಿದು ಇಲ್ಲಿ ನಡೆದು ಬಂದ ಪದ್ಧತಿ.

ದಿನಂಪ್ರತಿ ಬೆಳಗ್ಗೆ ಮತ್ತು ಸಂಜೆ ಸಾಂಗವಾಗಿ ಪೂಜೆ ನಡೆಯುವುದು. ಸಂಜೆಯ ಆರತಿ ನೋಡಲು ಎರಡು ಕಣ್ಣುಗಳು ಸಾಲದು. ಮರಾಠಿಯಲ್ಲಿರುವ ಭಜನೆಯನ್ನು ಬೇರಿನ್ಯಾವ ಭಾಷೆಯಲ್ಲೂ
ಆನಂದಿಸಲಾಗುವುದಿಲ್ಲ. ಅದರದೇ ಆದ ವೈಶಿಷ್ಟ್ಯ. ಆರತಿ ೧೫ ನಿಮಿಷಗಳಿಂದ ಅರ್ಧ
ತಾಸಿನವರೆವಿಗೂ ನಡೆಯುವುದು. ಆರತಿಯ ಸಮಯದಲ್ಲಿ ಹಾಡುವ ಭಜನೆ ತುಂಬಾ ಶ್ರಾವ್ಯವಾಗಿರುತ್ತದೆ. ಆರತಿಯಲ್ಲಿ ಹಾಡುವ ಕೆಲವು ತುಣುಕುಗಳು ಹೀಗಿವೆ –

೧) ಸುಖಕರ್ತಾ ದು:ಖಹರ್ತಾ ವಾರ್ತಾ ವಿಘ್ನಾಚೀ
ನುರವೀ ಪುರವೀ ಪ್ರೇಮ್ ಕೃಪಾ ಜಯಾಚೀ

೨) ಜಯ ಗಣೇಶ್ ಜಯ ಗಣೇಶ್ ಜಯ ಗಣೇಶ ದೇವಾ
ಮಾತಾ ಜಾಕೀ ಪಾರ್ವತೀ ಪಿತಾ ಮಹದೇವಾ

ಆರತಿ ಮಾಡುವಾಗ ದೇವಿ, ಅಂಬೆ, ಶಂಕರ, ವಿಠ್ಠಲರ ಭಜನೆಗಳನ್ನೂ ಹಾಡುವರು. ಹಾಡುತ್ತಾ
ಕೇಳುತ್ತಾ ಜನ ಮಂತ್ರಮುಗ್ಧರಾಗುವರು. ತಿಲಕರು ಎಂತಹ ಘನಕಾರ್ಯ ಮಾಡಿದರು. ಇಂತಹ ಕಾರ್ಯಗಳಿಂದ ಜನರನ್ನು ಒಗ್ಗೂಡಿಸುವುದು ಸುಲಭಸಾಧ್ಯವಲ್ಲವೇ? ನಗರದಲ್ಲೇ ಹೀಗಿದ್ದ
ಮೇಲೆ ಇನ್ನು ಹಳ್ಳಿಗಳಲ್ಲಿ ಈ ಹಬ್ಬದ ಸಂಭ್ರಮ ಹೇಳಲಸಾಧ್ಯ.

ಮುಂಬೈನಲ್ಲಿ ಲಾಲ್ಬಾಗ್ ಪ್ರದೇಶ ಇದಕ್ಕೆ ಬಹಳ ಪ್ರಸಿದ್ಧ. ಇಲ್ಲಿ ಬಹು ದೊಡ್ಡ ದೊಡ್ಡ ಗಣಪತಿಯ ಮೂರ್ತಿಗಳನ್ನು ನೋಡಬಹುದು. ಹಾಗೇ ವಡಾಲಾ ಮತ್ತು ಥಾಣೆ ಪ್ರದೇಶಗಳೂ ಗಣಪತಿ ಹಾಗೇ ಮಹಾರಾಷ್ಟ್ರದಲ್ಲಿ ಪುಣೆ ಮತ್ತು ಕೊಂಕಣ ಪ್ರದೇಶಗಳು ವಿಜೃಂಭಣೆಯಿಂದ ಹಬ್ಬವನ್ನಾಚರಿಸುವರು. ಮುಂಬೈ ನಗರದಲ್ಲಿ ೮೨೦೦ ಗಣಪತಿ ಮಂಡಳಿಗಳಿವೆ ಎಂದು ಸುದ್ದಿ ಪತ್ರಿಕೆಗಳು ತಿಳಿಸಿವೆ. ಗಲ್ಲಿ ಗಲ್ಲಿಗಳಲ್ಲೂ ಸಾರ್ವಜನಿಕ ಗಣೇಶನನ್ನು ಕೂರಿಸಿ ಸಂಭ್ರಮದಿಂದ ನಲಿಯುವರು. ಮೈಕ್ ಹಾಕಿಕೊಂಡು ಅಬ್ಬರ ಮಾಡುವ ಆ ನಲಿದಾಟ ಕೆಲವರಿಗೆ ಕಿರುಕುಳ ಆಗಿ ಕೋರ್ಟಿನ ಮೆಟ್ಟಲನ್ನೂ ಹತ್ತಿದ್ದಾರೆ. ಇದೀಗ ಸುಪ್ರೀಂಕೋರ್ಟ್ ಆದೇಶದಂತೆ ರಾತ್ರಿ ಹತ್ತರ ಮೇಲೆ ಮೈಕ್ ಹಾಕಬಾರದೆಂದು ನಿರ್ದೇಶಿಸಲಾಗಿದೆ. ಇನ್ನು ಮನೆಗಳಲ್ಲಿ, ಇರುವ ಸಣ್ಣ ಜಾಗದಲ್ಲಿ ಗಣಪತಿಗೆ ಪ್ರತ್ಯೇಕ ಮಂಟಪ ಮಾಡಿ ಅದರಲ್ಲಿ ಮೂರ್ತಿಯನ್ನಿಟ್ಟು ಪೂಜಿಸುವರು. ಯಾವಾಗಲೂ ಮನೆಯಲ್ಲಿ ಒಬ್ಬರಾದರೂ ಇದ್ದೇ ತೀರಬೇಕು. ಗಣಪನನ್ನು ಒಂಟಿಯಾಗಿ ಬಿಡಲು ತಯಾರಿಲ್ಲ. ಮೋದಕ, ಕರ್ಜಿಕಾಯಿ, ಪಂಚ ಕಜ್ಜಾಯದ ನೈವೇದ್ಯ ಮಾಡಿ ಪ್ರಸಾದವೆಂದು ಎಲ್ಲರಿಗೂ ಹಂಚುವರು. ಪುಣೆಯಲ್ಲಂತೂ ಇದು ಒಂದು ನಾಡ ಹಬ್ಬದಂತೆಯೇ. ಮೈಸೂರಿನ ದಸರಾ ಸಂಭ್ರಮವನ್ನು ನೋಡಲು ಹೇಗೆ ವಿದೇಶದಿಂದೆಲ್ಲಾ ಪ್ರವಾಸಿಗರು ಬರುವರೋ ಹಾಗೆ ಇಲ್ಲಿ ಗಣೇಶೋತ್ಸವವನ್ನು ನೋಡಲು ಬರುವರು.

ಇನ್ನು ಎಂತೆಂತಹ ಗಣಪತಿಗಳನ್ನು ನೋಡಬಹುದು ಎಂದರೆ – ಶ್ರೀಮಂತ ಗಣಪತಿ, ಎತ್ತರದ ಗಣಪತಿ, ಜಾತ್ಯಾತೀತ ಗಣಪತಿ, ಇಂದಿನ ಸಮಾಜದ ಸ್ಥಿತಿ ಬಿಂಬಿಸುವ ಎಲ್ಲ ರೀತಿಯ ಗಣಪತಿಗಳನ್ನು ನೋಡಬಹುದು. ಎತ್ತರದ ಗಣಪತಿ ೧೨ ಅಡಿ ಎತ್ತರದವರೆವಿಗೆ ಇರುವುದನ್ನು ಕಂಡಿರುವೆ. ಹಾಗೇ ಅತ್ಯಂತ ಶ್ರೀಮಂತ ಗಣಪತಿ ಕನ್ನಡಿಗರದ್ದೇ ಆದ ವಡಾಲಾದಲ್ಲಿಯ ಗೌಡ ಸಾರಸ್ವತ ಬ್ರಾಹ್ಮಣರ ಸಮಾಜದ ಗಣಪತಿಯ ಚಿನ್ನದ ಕಿರೀಟದ ತೂಕ ೨೨ ಕಿಲೋಗ್ರಾಂಗಳು. ಆ ಮೂರ್ತಿಯ ಮೈ ಮೇಲೆ ೫೦ ಕಿಲೋಗ್ರಾಂ ಚಿನ್ನ ಮತ್ತು ೪೦೦ ಕಿಲೋಗ್ರಾಂಗಳ ಬೆಳ್ಳಿಯ ಆಭರಣ ತೊಡಿಸುವರು. ಆ ಮೂರ್ತಿಯ ಕೈ ಮತ್ತು ಮೋದಕದ ತೂಕ ೬ ಕಿಲೋಗ್ರಾಂ ಚಿನ್ನದ್ದಾಗಿರುತ್ತದೆ. ಸಿಂಹಾಸನವನ್ನು ೪೦೦ ಕಿಲೋಗ್ರಾಂ ಬೆಳ್ಳಿಯಿಂದ ಮಾಡಲಾಗಿದೆ. ಆ ಗಣಪತಿಯ ಒಂದು ಭಾವಚಿತ್ರವನ್ನು ಇಲ್ಲಿ ಹಾಕಲಾಗಿದೆ. ಈ ಗಣಪತಿಯ ರಕ್ಷಣೆಗೇ ಹಗಲಿರುಳೂ ವಿಶೇಷ ಕಾವಲು ಕಾಯುವುದು.

ಇನ್ನು ಗಣಪತಿ ಮಂಡಲಿಗಳಲ್ಲಿ ಮುಸ್ಲಿಮರು ಮತ್ತು ಕ್ರಿಶ್ಚಿಯನ್ನರ ಪಾತ್ರವೇನೂ ಕಡಿಮೆಯದ್ದಲ್ಲ. ಕಿಂಗ್ಸ್ ಸರ್ಕಲ್ ನಲ್ಲಿರುವ ಒಂದು ಗಣಪತಿ ಮಂಡಳಿಯಲ್ಲನ್ನು ಆರಂಭಿಸಿದವರು ಕ್ರಿಶ್ಚಿಯನ್ನರು ಮತ್ತು ನಡೆಸುತ್ತಿರುವ ೧೨ ಜನಗಳಲ್ಲಿ ೪ ಜನ ಮುಸ್ಲಿಮರು ಇದ್ದಾರೆ.

ಅಂತೆಯೇ ನಮ್ಮ ಕ್ವಾರ್ಟರ್ಸಿನಲ್ಲಿಯೂ ದೊಡ್ಡದಾದ ಗಣಪತಿಯನ್ನು ಕುಳ್ಳಿರಿಸಿ ಪೂಜೆಗೈಯುವರು. ಈ ವರ್ಷ ನಮ್ಮ ಕಾಲೋನಿಗೆ ಮತ್ತೆ ಗಣಪತಿ ಬರುತ್ತಿದ್ದಾನೆ. ಅವನನ್ನು ಎದುರುಗೊಳ್ಳಲು ಎಷ್ಟೆಲ್ಲಾ ಸಿದ್ಧತೆಗಳು ನಡೆಯುತ್ತಿವೆ. ೨೫೦ಕ್ಕೂ ಹೆಚ್ಚಿನ ಮನೆಯವರೆಲ್ಲರೂ ಒಂದು ಕುಟುಂಬದವರಂತೆ ವರ್ತಿಸುತ್ತಾ ೧೦ ದಿನಗಳವರೆವಿಗೆ ಗಣಪತಿಯನ್ನು ಪೂಜಿಸುವರು. ೧೯೮೫ರಲ್ಲಿ ರಿಸರ್ವ್ ಬ್ಯಾಂಕ್ ಆಫೀಸರ್ ಕಾಲೋನಿಯಲ್ಲಿ ಗೋರೆಗಾಂವಿನ ಗೋಕುಲಧಾಮದಲ್ಲಿ ಗಣೇಶೋತ್ಸವ ಪ್ರಾರಂಭವಾಯಿತು. ಮೊದಲ ವರ್ಷದಿಂದಲೇ ಗಣಪತಿಯನ್ನು ಕುಳ್ಳಿರಿಸುತ್ತಿದ್ದಾರೆ. ಆಗ ಚೆನ್ನೈನಿಂದ ವರ್ಗವಾಗಿ ಬಂದಿದ್ದ ಕೆಲವು ಉತ್ಸಾಹ ವೈದಿಕ ಸಂಪ್ರದಾಯಸ್ಥ ಗೆಳೆಯರ ಬಳಗ ಈ ಉತ್ಸವವನ್ನು ಪ್ರಾರಂಭಿಸಿತು. ಪ್ರತಿವರ್ಷವೂ ಹಬ್ಬಕ್ಕೆ ಒಂದು ತಿಂಗಳ ಮುಂಚಿತವಾಗಿ ದೇಣಿಗೆ ಸ್ವೀಕಾರ ಮತ್ತು ಉತ್ಸವದ ಆಚರಣೆಗೆ ಸಕಲ ಸಿದ್ಧತೆಗಳ ಕೆಲಸ ಪ್ರಾರಂಭಿಸುತ್ತಾರೆ. ಮೊದಲೇ ನಿಗದಿಸಿದಂತೆ ಒಂದು ವರ್ಷದ ಗಣಪತಿಯ ದರವನ್ನು ಒಬ್ಬರು ಭರಿಸುತ್ತಾರೆ. ಸಾಮಾನ್ಯವಾಗಿ ೫ ಅಡಿ ಎತ್ತರವಿರುವ ಈ ಗಣಪತಿಗೆ ಕೊಡಬೇಕಿರುವ ದರ ೫,೦೦೦ ರೂಪಾಯಿಗಳು (ವರ್ಷ ವರ್ಷಕ್ಕೆ ಅದರ ದರ ಸ್ವಲ್ಪ ಹೆಚ್ಚು ಕಡಿಮೆಯಾಗುತ್ತಿರುತ್ತದೆ). ಇಲ್ಲಿಯ ವಾಡಿಕೆಯ ಪ್ರಕಾರ ಗಣಪತಿಯನ್ನು ಹಬ್ಬದ ದಿನದಂದೇ ತಯಾರಕರಿಂದ ಕೊಂಡು ತರುವುದರಿಂದ ಮತ್ತು ಈ ವರ್ಷ ಗಣಪತಿಯ ಬೆಲೆ ತುಟ್ಟಿಯಾಗುವುದೆಂಬ ವದಂತಿಗಳ ಪ್ರಕಾರ ದರ ಸ್ವಲ್ಪ ಹೆಚ್ಚಾಗಬಹುದು ಎಂದು ನಿರೀಕ್ಷಿಸಲಾಗಿದೆ.

ಹಬ್ಬದ ದಿನ ಬೆಳಗಿನ ಜಾವದಲ್ಲಿ ತಯಾರಕರಿಂದ ಗಣಪತಿಯ ಮೂರ್ತಿಯನ್ನು ಕೊಂಡು ಲಾರಿಯ ಮೂಲಕ ಕಾಲೋನಿಗೆ ತರುವರು. ಕಾಲೋನಿಯ ಮಧ್ಯ ಭಾಗದಲ್ಲಿರುವ ಪಾರ್ಕಿನ ಮುಂಭಾಗದ ಮುಕ್ತ ಸಭಾಂಗಣದಲ್ಲಿರುವ ಸ್ಟೇಜಿನ ಮೇಲೆ ಮೂರ್ತಿಯನ್ನಿರಿಸುವರು. ಹತ್ತೂ ದಿನಗಳ ಬೆಳಗ್ಗೆ ಮತ್ತು ಸಂಜೆಯ ಪೂಜೆ ಮತ್ತಿತರೇ ಕಾರ್ಯಕ್ರಮಗಳನ್ನು ವೀಕ್ಷಿಸಲು ದೊಡ್ಡ ಚಪ್ಪರವನ್ನು ಹಾಕಿ, ಕುರ್ಚಿಗಳನ್ನು ಹಾಕುವರು. ಮನೆಗಳಲ್ಲಿ ಗಣಪತಿಯನ್ನು ಇಡುವವರು ಪೂಜೆಯನ್ನು ಮುಗಿಸಿ ಈ ಬೃಹತ್ ಮೂರ್ತಿಯ ಪೂಜೆಗೆ ಎಲ್ಲರೂ ಸೇರುವರು. ಮನೆಗಳಿಂದ ಪ್ರಸಾದವನ್ನೂ ತಂದು ನೈವೇದ್ಯಕ್ಕರ್ಪಿಸುವರು. ಪೂಜೆ ನೈವೇದ್ಯಗಳಾದ ಬಳಿಕೆ ನೆರೆದ ಎಲ್ಲರಿಗೂ ಅದನ್ನು ವಿತರಿಸುವರು. ಸುತ್ತ ಮುತ್ತಲಿರುವ ಭಾರತ್ ಪೆಟ್ರೋಲಿಯಂ, ಓಎನ್‍ಜಿಸಿ, ಹಿಂದುಸ್ತಾನ್ ಪೆಟ್ರೋಲಿಯಂ ಕಾಲೋನಿಗಳ ನಿವಾಸಿಗಳಲ್ಲದೇ ಖಾಸಗೀ ನಿವಾಸ ಸಂಕುಲವಾದ ಲಕ್ಷಚಂಡಿಯ ನಿವಾಸಿಗಳೂ ಬಂದು ಪೂಜೆಯಲ್ಲಿ ಪಾಲ್ಗೊಳ್ಳುವರು. ಈ ಪ್ರದೇಶದಲ್ಲಿ ಹಾಲಿನ ವಿತರಕರು, ನಿತ್ಯಬಳಕೆಯ ವಸ್ತುಗಳ ವಿತರಕರು, ಅಂಗಡಿಯವರು ಮತ್ತಿತರು ದೇಣಿಗೆಯನ್ನೂ ಕೊಡುವರು. ಕಾಲೋನಿಯಲ್ಲಿರುವ ನಿವಾಸಿಗಳೆಲ್ಲರೂ ದೇಣಿಗೆಯನ್ನು ಕೊಡುವುದಲ್ಲದೇ, ಪ್ರತಿನಿತ್ಯದ ಪೂಜೆಗೆ ಬೇಕಿರುವ ಹೂವು, ತೆಂಗಿನಕಾಯಿ ಮತ್ತು ಪ್ರಸಾದ ವಿತರಣೆಗೆ ತಿನಿಸುಗಳನ್ನೂ ತಂದಿಡುವರು. ಅವಶ್ಯಕತೆ ಇರುವ ಇನ್ನಿತರೇ ವಸ್ತುಗಳನ್ನು ಸಂಘಟಕರು ಖರೀದಿಸಿ ಪೂಜೆಯನ್ನು ಸಾಂಗವಾಗಿ ನಡೆಯುವಂತೆ ನೋಡಿಕೊಳ್ಳುವರು.

ಪೂಜೆಯಲ್ಲಿ ಗಣಪತಿಯೊಂದಿಗೆ ಲಲಿತಾ ದೇವಿ, ಅಯ್ಯಪ್ಪ ಸ್ವಾಮಿ, ನವಗ್ರಹ, ಲಕ್ಷ್ಮಿಯಲ್ಲದೇ ನಿವಾಸಿಗಳ ಇಷ್ಟ ದೈವಗಳ ಮೂರ್ತಿ ಅಥವಾ ಚಿತ್ರಪಟಗಳಿಗೂ ಪೂಜೆಯು ಸಲ್ಲುವುದು. ಪ್ರತಿನಿತ್ಯ ಬೆಳಗ್ಗೆ ೬ ಘಂಟೆಗೆ ಲಲಿತಾಸಹಸ್ರನಾಮದೊಂದಿಗೆ ಗಣಪತಿಯ ಪೂಜೆಯಾದರೆ, ಸಂಜೆ ೭ ಘಂಟೆಗೆ ವಿಷ್ಣುಸಹಸ್ರನಾಮ, ರುದ್ರ ನಮಕ ಚಮಕಗಳೊಂದಿಗೆ ಉಪನಿಷತ್ತುಗಳ ಪಾರಾಯಣವಾಗುವುದು. ಶನಿವಾರ ಭಾನುವಾರಗಳಂದು ವಿಶೇಷವಾಗಿ ಅಯ್ಯಪ್ಪ ಭಜನೆ, ಲಲಿತಾ ಸಹಸ್ರನಾಮಯುಕ್ತ ಕುಂಕುಮಾರ್ಚನೆ, ನವಗ್ರಹ ಹೋಮ, ನಕ್ಷತ್ರ ಹೋಮಗಳನ್ನು ನಡೆಸುವರು. ಈ ಮಧ್ಯೆ ಒಂದು ಭಾನುವಾರ ಬೆಳಗ್ಗೆ ಗಣಹೋಮವನ್ನೂ ನಡೆಸುವರು. ನಮ್ಮ ಕಾಲೋನಿಯಲ್ಲಿರುವ ಮಕ್ಕಳಿಗಂತೂ ಈ ಹತ್ತೂ ದಿನಗಳು ಹಬ್ಬವಿದ್ದಂತೆ. ದಿನ ಸಂಜೆ ವಿತರಿಸುವ ಕಾಲೋನಿಯಲ್ಲಿನ ಮನೆಗಳಿಂದ ನೈವೇದ್ಯಕ್ಕಿರಿಸುವ ೧೫-೨೦ ಬಗೆಯ ಪ್ರಸಾದದ ರುಚಿ, ಈ ಹತ್ತೂ ದಿನಗಳ ಅವರುಗಳ ಸಂಜೆಯಾಟಕ್ಕೆ ಕಡಿವಾಣ ಹಾಕಿದಂತಿದೆ.

ಮಹಾರಾಷ್ಟ್ರದಲ್ಲಿರುವ ಪುಣೆ ಮತ್ತು ಅಹಮದ್‍ನಗರಗಳ ಸುತ್ತುಮುತ್ತಲಿನಲ್ಲಿರುವ ಅಷ್ಟ ವಿನಾಯಕ ಮಂದಿರಗಳು ಬಹಳ ಪ್ರಸಿದ್ಧ ಪುಣ್ಯಕ್ಷೇತ್ರವಾಗಿವೆ. (ಎಂಟು ಗಣಪತಿಗಳು) –

೧. ಮೋರೆಗಾಂವಿನ ಮಯೂರೇಶ್ವರ
೨. ತೇವೂರಿನ ಶ್ರೀ ಚಿಂತಾಮಣಿ
೩. ರಂಜನಗಾಂವಿನ ಶ್ರೀ ಮಹಾಗಣಪತಿ
೪. ಸಿದ್ಧಟೇಕಿನ ಸಿದ್ಧಿ ವಿನಾಯಕ
೫. ಓಝಾರಿನ ಶ್ರೀ ವಿಘ್ನೇಶ್ವರ
೬. ಲೇಣ್ಯಾದ್ರಿಯ ಶ್ರೀ ಗಿರಿಜಾತ್ಮಕ
೭. ಪಾಲಿಯ ಹತ್ತಿರದ ಶ್ರೀ ಬಲ್ಲಾರೇಶ್ವರ
೮. ಮಹಾಡಿನ ಶ್ರೀ ವರದ ವಿನಾಯಕ

ಗಣಪತಿಯನ್ನು ಹತ್ತು ದಿನಗಳು ಇಟ್ಟು ನಂತರ ಹತ್ತನೆಯ ದಿನ ಅದನ್ನು ಭಾರೀ ಮೆರವಣಿಗೆಯಲ್ಲಿ ಸಮುದ್ರ ಅಥವಾ ಹತ್ತಿರದ ಕೆರೆ ಕೋಡಿಗಳಲ್ಲಿ ಬಿಡುವರು. ಅಂದು ನಗರದಲ್ಲಿ ಎಲ್ಲೆಲ್ಲೂ ಟ್ರಾಫಿಕ್ ಜಾಮ್ ಆಗಿ ಜನಜೀವನ ಸ್ಥಬ್ಧವಾಗುವುದು. ಎಲ್ಲ ಕಛೇರಿಗಳಿಗೂ ಅರ್ಧ ದಿನದ ರಜೆ ಘೋಷಿಸುವರು. ಸಾಮಾನ್ಯವಾಗಿ ಎಲ್ಲ ಗಣಪತಿಗಳನ್ನೂ ಸಮುದ್ರದ ನೀರಿಗೆ ಬಿಡುವುದರಿಂದ ಸಮುದ್ರ ತೀರದಲ್ಲೀ ಭಾರೀ ಜನಸಂದಣಿ. ಪತ್ರಿಕೆಗಳ ಪ್ರಕಾರ ೩೧೦೦೦ ದೊಡ್ಡ ಗಣಪತಿಗಳನ್ನೂ ಮತ್ತು ೧.೫ ಲಕ್ಷ ಚಿಕ್ಕ ಗಣಪತಿಗಳನ್ನೂ ವಿಸರ್ಜನೆ ಮಾಡುವರು. ಅದರ ಚಿತ್ರವನ್ನು ನೀವು ನೋಡಿರಬಹುದು.

ಒಟ್ಟಿನಲ್ಲಿ ಈ ಸಾರ್ವಜನಿಕ ಗಣೇಶೋತ್ಸವ ಜಾತಿ ಮತ ಭೇದವಿಲ್ಲದೇ ಎಲ್ಲರೂ ಒಗ್ಗೂಡಿ
ಸಂಭ್ರಮದಿಂದ ಆಚರಿಸುವ ಒಂದು ನಾಡ ಹಬ್ಬ. ಇಂತಹ ಹಬ್ಬಗಳು ಇನ್ನೂ ಹೆಚ್ಚಾಗಿ ದೇಶ ಒಂದಾಗಿರಲಿ ಎಂದು ಆಶಿಸೋಣವೇ?

ವಿಭಾಗಗಳು
ಆಚಾರ-ವಿಚಾರ - Rituals ಲೇಖನಗಳು

ಗೌರಿ ಗಣಪತಿ ಹಬ್ಬ

ಗೌರಿ ಎಂಬ ಪದ ಪಾರ್ವತೀದೇವಿಗೆ ಪರ್ಯಾಯವಾದ ಪದ. ಆಕೆಯು ಸೃಷ್ಟಿ, ಸ್ಥಿತಿ, ಲಯ ಕಾರ್ಯಗಳಲ್ಲಿ ಕೊನೆಯದನ್ನು ತನ್ನ ಅಧಿಕಾರದಲ್ಲಿ ಪ್ರಧಾನವಾಗಿ ಹೊಂದಿರುವ ಮಹಾದೇವನ ಅರ್ಧಾಂಗಿ, ಮಹಾದೇವಿ. ಆಕೆಯು ಸಂಹಾರ ಮಾಡುವಾಗ ಕೃಷ್ಣವರ್ಣವನ್ನು ಅಲಂಕರಿಸಿರುವ ಕಾಳೀ ಮಾತೆ, ವಿದ್ಯಾಪ್ರದಾನ ಮಾಡುವಾಗ ಶ್ಯಾಮಲ ವರ್ಣದ ಶ್ಯಾಮಲಾಂಬಿಕೆಯಂತೆ, ಸೌಮಂಗಲ್ಯ, ಸೌಭಾಗ್ಯ ಸಂಪತ್ತನ್ನು ಅನುಗ್ರಹಿಸುವಾಗ ಸಂಪಿಗೆ ಹೂವಿನ ಬಣದಿಂದ ಮತ್ತು ಕೆಲವೊಮ್ಮೆ ಹಿಮ ಶುಭ್ರ ವರ್ಣದಿಂದ ಕಂಗೊಳಿಸುವ ಗೌರೀಮಾತೆ.

ಭಾದ್ರಪದ ಶುಕ್ಲ ತೃತೀಯ ತಿಥಿಯಂದ (ತದಿಗೆ) ಶ್ರೀ ಗೌರಿ ಹಬ್ಬ. ಅಂದು ಸೂರ್ಯೋದಯ ಸಮಯದಲ್ಲಿ ತೃತೀಯ ತಿಥಿ ಇರಬೇಕು. ಗಣಪತಿಯ ಪೂಜೆಗೆ ಯೋಗ್ಯವಾಗಿರುವ ಚತುರ್ಥೀ ತಿಥಿಯ ಯೋಗವನ್ನು ಗೌರಿದೇವಿಯು ತುಂಬಾ ಪ್ರೀತಿಸುತ್ತಾಳೆ. ಹಾಗಾಗಿ ತೃತೀಯದೊಡನೆ ಚತುರ್ಥೀ ಯೋಗವು ಕೂಡಿ ಬಂದರೆ ಅಂದೇ ಗೌರಿಹಬ್ಬವನ್ನು ಆಚರಿಸಬೇಕು. ಗೌರಿದೇವಿಯು ಪರ್ವತ ಸಾರ್ವಭೌಮನಾದ ಹಿಮವಂತನ ಮಗಳು. ವರುಷಕ್ಕೊಮ್ಮೆ ತವರಿಗೆ ಬರುವ ಅವಳಿಗಾಗಿ ಹಬ್ಬವನ್ನು ಮಾಡುವುದು.

ಗೌರೀ ದೇವಿಯನ್ನು ಹೃದಯದಲ್ಲಿ ಧ್ಯಾನ ಮಾಡಿ ಅನಂತರ ಮಾತೆಗೆ ಬಾಹ್ಯಪೂಜೆ ಅರ್ಪಿಸಬೇಕು. ಗೌರಿದೇವಿಯ ಪ್ರತಿಮೆಯನ್ನು ಸುವರ್ಣ ರೂಪದಲ್ಲಿ, ಕಲಶ ರೂಪದಲ್ಲಿ, ಅರಿಶಿನ ರೂಪದಲ್ಲಿ ಅಥವಾ ಮಣ್ಣಿನ ರೂಪದಲ್ಲಿ ನಿರ್ಮಿಸಿ ಪೂಜೆ ಸಲ್ಲಿಸಬೇಕು. ಮರಳಿನಲ್ಲೂ ಗೌರಿಯನ್ನು ಆವಾಹಿಸಿ ಪೂಜಿಸುವ ಸಂಪ್ರದಾಯವಿದೆ. ನದಿತಟದಲ್ಲಿರುವ ಮರಳನ್ನು ಅರಿಶಿನದ ಬಟ್ಟೆಯಲ್ಲಿ ಇರಿಸಿ ಗಂಟು ಹಾಕಿ ಷೋಡಶೋಪಚಾರ ಪೂಜೆಯನ್ನು ಅರ್ಪಿಸಿ, ಮನೆಗೆ ಅಥವಾ ದೇಗುಲಕ್ಕೆ ತಂದು ಪೂಜಿಸುವರು. ಆಚಮನ, ಸಂಕಲ್ಪ, ಕಳಸ ಪೂಜೆಯ ನಂತರ ಮಹಾಗಣಪತಿಗೆ ಪೂಜಿಸಿ, ಸ್ವರ್ಣಗೌರಿಯನ್ನು ಪ್ರತಿಷ್ಠಾಪಿಸಬೇಕು.

ಪುಷ್ಪಾಕ್ಷತೆಯಿಂದ ಆವಾಹಿಸಿ, ರತ್ನಸಿಂಹಾಸನವನ್ನು ಸಮರ್ಪಿಸಬೇಕು. ಹೊಸದಾದ ಹದಿನಾರು ಗಂಟುಗಳ ದಾರವನ್ನೂ ದೇವಿಯೊಂದಿಗೆ ಪೂಜೆಗಿಡಬೇಕು. ಯಥಾವತ್ ಪಾದ್ಯ, ಅರ್ಘ್ಯ, ಆಚಮನ, ಮಧುಪರ್ಕ, ಪಂಚಾಮೃತ ಸ್ನಾನ, ಶುದ್ಧೋದಕ ಸ್ನಾನ, ವಸ್ತ್ರ, ಆಭರಣ, ಯಜ್ಞೋಪವೀತ, ಗಂಧ, ಅಕ್ಷತೆ, ಅರಿಶಿನ, ಕುಂಕುಮ ಮತ್ತಿತರೇ ಸೌಭಾಗ್ಯ ದ್ರವ್ಯಗಳನ್ನು ದೇವಿಗೆ ಅರ್ಪಿಸಬೇಕು. ಆಭರಣವೆಂದು ಹತ್ತಿಯಿಂದ ಮಾಡಿದ ಗೆಜ್ಜೆವಸ್ತ್ರವನ್ನು ಅರ್ಪಿಸುವುದು ಈಗಿನ ರೂಢಿ. ಹದಿನಾರು ಗಂಟುಗಳ ದಾರಕ್ಕೆ (ದೋರ) ಸ್ವರ್ಣಗೌರಿ, ಮಹಾಗೌರಿ, ಕಾತ್ಯಾಯಿನಿ, ಕೌವರಿ, ಭದ್ರಾ, ವಿಷ್ಣು ಸೋದರೀ, ಮಂಗಳ ದೇವತಾ, ರಾಕೇಂದುವದನಾ, ಚಂದ್ರಶೇಖರಪ್ರಿಯಾ, ವಿಶ್ವೇಶ್ವರಪತ್ನೀ, ದಾಕ್ಷಾಯಣೀ, ಕೃಷ್ಣವೇಣೀ, ಭವಾನೀ, ಲೋಲೇಕ್ಷಣಾ, ಮೇನಕಾತ್ಮಜಾ, ಸ್ವರ್ಣಗೌರೀ ಎಂಬ ಹದಿನಾರು ಹೆಸರುಗಳಿಂದ ಪೂಜಿಸಬೇಕು. ನಂತರ ದೇವಿಗೆ ಅಷ್ಟೋತ್ತರ ಶತನಾಮಾವಳಿ ಪೂರ್ವಕ ಕುಂಕುಮಾರ್ಚನೆ ಮಾಡಿ, ಧೂಪ, ದೀಪ, ನೈವೇದ್ಯ, ತಾಂಬೂಲ, ದಕ್ಷಿಣೆ, ಅರ್ಘ್ಯ, ನೀರಾಜನ, ಪುಷ್ಪಾಂಜಲಿ ಮತ್ತು ಪ್ರದಕ್ಷಿಣೆ ನಮಸ್ಕಾರಗಳನ್ನು ಸಲ್ಲಿಸಬೇಕು. ಅಂದು ವಿಶೇಷವಾದ ಅನ್ನ ಹೆಸರುಬೇಳೆಯಿಂದ ತಯಾರಿಸಿದ ಹುಗ್ಗಿಯನ್ನು ನೈವೇದ್ಯವಾಗಿ ಅರ್ಪಿಸುವುದೂ ವಾಡಿಕೆ. ನಂತರ ಪೂಜಿಸಿದ ದಾರವನ್ನು ಹೂವಿನೊಂದಿಗೆ ಕೈಗೆ ಹಿರಿಯರಿಂದ ಕಟ್ಟಿಸಿಕೊಂಡು ಅವರಿಗೆ ನಮಸ್ಕಾರವನ್ನು ಸಲ್ಲಿಸಬೇಕು.

ಮಾರನೆಯದಿನ ಮಗನಾದ ಗಣಪತಿಯನ್ನು ಕೈಲಾಸಕ್ಕೆ ಕರೆದೊಯ್ಯಲು ಬರುವನು. ಅವನಿಗೆ ಪೂಜೆ ಸಲ್ಲಿಸುವುದೇ ಗಣಪತಿ ಹಬ್ಬ. ಮನೆಯ ಮಗಳಾದ ಗೌರಿಯನ್ನು ಕಳುಹಿಸಿಕೊಡುವಾಗ ಸೋಬಲಕ್ಕಿ ಇಡುವರು. ಅವಳನ್ನು ಕಳುಹಿಸುವದಕ್ಕೆ ವಿಶೇಷದಿನವನ್ನು ನೋಡುವುದು ಪರಿಪಾಠ. ಮಂಗಳವಾರ, ಶುಕ್ರವಾರ, ಪಂಚಮೀ, ನವಮೀ ತಿಥಿಗಳಂದು ಮನೆಯ ಮಗಳನ್ನು ಕಳುಹಿಸುವುದಿಲ್ಲ.

ಗಣಪತಿ ಪೂಜೆ

ಗಣಾನಾಂ ತ್ವಾ ಗಣಪತಿಂ ಹವಾಮಹೇ, ಕವಿಂ ಕವೀನಾಂ ಉಪಮಶ್ರಮವಸ್ತಮಂ|
ಜ್ಯೇಷ್ಠ ರಾಜಂ ಬ್ರಹ್ಮಣಾಂ ಬ್ರಹ್ಮಣಸ್ಪತ ಆನ:ಶೃಣ್ವನ್ ನೂತಿಭಿ: ಸೀದ ಸಾದನಮ್

ಇದು ವೇದ ಮಂತ್ರವಾದರೆ, ಏಕದಂತಾಯ ವಿದ್ಮಹೇ ವಕ್ರತುಂಡಾಯ ಧೀಮಹಿ ತನ್ನೋ ದಂತಿ: ಪ್ರಚೋದಯಾತ್ ಎಂಬುದು ಬೀಜಾಕ್ಷರ ಮಂತ್ರ.

ತ್ವಮೇವ ಕೇವಲಂ ಕರ್ತಾಸಿ
ತ್ವಮೇವ ಕೇವಲಂ ಧರ್ತಾಸಿ
ತ್ವಮೇವ ಕೇವಲಂ ಹರ್ತಾಸಿ
ತ್ವಮೇವ ಸರ್ವಂ ಖಲ್ವಿದಂ ಬ್ರಹ್ಮಾಸಿ
ತ್ವಂ ಸಾಕ್ಷಾದಾತ್ಮಾಸಿ ಆತ್ಮಂ
ತ್ವಂ ಬ್ರಹ್ಮಾ ವಿಷ್ಣುಸ್ತ್ವಂ ರುದ್ರಸ್ತ್ವಂ ಇಂದ್ರಸ್ತ್ವಂ ಅಗ್ನಿಸ್ತ್ವಂ ವಾಯುಸ್ತ್ವಂ ಸೂರ್ಯಸ್ತ್ವಂ ಚಂದ್ರಮಾಸ್ತ್ವಂ ಬ್ರಹ್ಮಭೂರ್ಭುವಸ್ಸುವರೋಮ್.

ಗಣೇಶಾಥರ್ವಶೀರ್ಷದಲ್ಲಿ ಹೀಗೆ ಆತನನ್ನು ವರ್ಣಿಸಿದೆ.

ಗಣೇಶನು ಶಿವನ ಗಣಗಳ ಅಧಿಪತಿ. ಸ್ವರ್ಣಗೌರಿಯ ಪ್ರೀತಿಯ ಪುತ್ರ. ವಿಘ್ನ ವಿನಾಶಕ ವಿನಾಯಕ.

ನಮ್ಮ ದೇಶದಲ್ಲಿ ಗಣಪತಿಯ ಪೂಜೆಯು ಅನಾದಿ ಕಾಲದಿಂದಲೂ ನಡೆದು ಬಂದಿದೆ. ಆನೆಗಳ ಹಿಂಡು ಹೊಲ ಗದ್ದೆಗಳಿಗೆ ನುಗ್ಗಿ ಬೆಳೆಯನ್ನು ಹಾಳು ಮಾಡುವುದನ್ನು ತಡೆಯುವ ಸಲುವಾಗಿ ರೈತಾಪಿ ಜನಗಳು ಆನೆಯ ಮುಖವುಳ್ಳ ದೇವನನ್ನು ಪೂಜಿಸಿದರೆ, ಗುದಾಮುಗಳಲ್ಲಿ ಧಾನ್ಯಗಳನ್ನು ತಿಂದು ಹಾಳು ಮಾಡುವ ಇಲಿಗಳನ್ನೂ ಪೂಜಿಸಿ ಇಬ್ಬರನ್ನೂ ಸಮಾಧಾನಿಸುವುದೂ ಹಬ್ಬದ ಒಂದು ಕಾರಣವೆಂದು ಕೆಲವರು ಹೇಳುವರು. ಅದಲ್ಲದೇ ಹೊಲಗಳಲ್ಲಿ ನಿಲ್ಲಿಸುವ ಬೆರ್ಚಪ್ಪನಿಗೂ ಗಣಪತಿಯಂತೆ ಡೊಳ್ಳು ಹೊಟ್ಟೆಯನ್ನು ಮಾಡಿರುತ್ತಾರೆ. ಇದಲ್ಲದೇ ಗಣಪತಿಯನ್ನು ಬರ್ಮಾ, ಮಲೇಶಿಯಾ, ಇಂಡೋನೇಶಿಯಾ, ಚೀನಾ, ಸುಮಾತ್ರಾ, ಜಾವಾ, ಜಾಪಾನ್ ಮತ್ತಿತರ ದೇಶಗಳಲ್ಲಿಯೂ ಪೂಜಿಸುತ್ತಿದ್ದರು.

ಯಾಜ್ಞವಲ್ಕ್ಯ ಸ್ಮೃತಿಯ ಪ್ರಕಾರ ಅಂಬಿಕೆಯು ಗಣಪತಿಯ ತಾಯಿ. ಇನ್ನೊಂದು ಕಥೆಯ ಪ್ರಕಾರ ಆತನು ಪಾರ್ವತಿಯ ಮೈಯಿಂದ ಹುಟ್ಟಿದವನು. ಇದರ ಬಗೆಗಿನ ಕಥೆ ಎಲ್ಲರಿಗೂ ತಿಳಿದಿರುವುದೇ.

ಶಿವಪುರಾಣದಲ್ಲಿ ಹೇಳಿರುವಂತೆ ಗಣಪತಿಯನ್ನು ತುಳಸೀ ದಳದಲ್ಲಿ ಪೂಜಿಸಬಾರದು. ಏಕೆಂದರೆ ತುಳಸಿಯ ದರ್ಶನ ಮತ್ತು ಗಂಧಗಳು ಗಣೇಶ ದೇವರಿಗೆ ಸಂಬಂಧಪಟ್ಟ ಒಳಕೇಂದ್ರಗಳನ್ನು ಮುಚ್ಚುತ್ತವೆ. ಕೇತಕೀ ಪುಷ್ಪದ ಸ್ಪರ್ಶವು ಶಿವನ ದರ್ಶನಕ್ಕೆ ಸಂಬಂಧಪಟ್ಟ ಕೇಂದ್ರಗಳ ಪ್ರಭಾವವನ್ನು ಕಡಿಮೆ ಮಾಡುತ್ತದೆ. ಹಾಗೆಯೇ ಚೌತಿಯ ಚಂದ್ರನ ದರ್ಶನವೂ ಗಣೇಶನ ಉಪಾಸನೆಗೆ ಪ್ರತಿಬಂಧಕವಾಗಿದೆ. ಸೂರ್ಯನು ಬುದ್ಧಿತತ್ವಕ್ಕೆ ಮತ್ತು ಚಂದ್ರನು ಮನಸ್ತತ್ವಕ್ಕೆ ದೇವತಿ. ಗಣೇಶನ ಆಳ್ವಿಕೆಗೆ ಒಳಪಟ್ಟಿರುವ ಇಪ್ಪತ್ತೊಂದು ತತ್ವಗಳಲ್ಲಿ ಕೊನೆಯದು ಮನಸ್ಸು. ಉಳಿದ ಇಪ್ಪತ್ತು ತತ್ವಗಳಾವುವೆಂದರೆ, ಪಂಚಭೂತಗಳು, ಪಂಚ ಕರ್ಮೇಂದ್ರಿಯಗಳು, ಪಂಚ ಜ್ಞಾನೇಂದ್ರಿಯಗಳು ಮತ್ತು ಪಂಚತನ್ಮಾತ್ರೆಗಳು. ಮನಸ್ಸನ್ನು ಸಂಯಮದಿಂದ ಒಳಗಿನ ಜ್ಞಾನಾಕಾಶದಲ್ಲಿ ಲಯಗೊಳಿಸಿದರೆ ಗಣೇಶನ ಮಹಿಮೆಯ ಅನುಭವ ಉಂಟಾಗುತ್ತದೆ. ಗಣೇಶ ಚತುರ್ಥಿಯ ರಾತ್ರಿ ಇಂತಹ ಸಂಯಮದಲ್ಲಿದ್ದು ಭಗವಂತನ ನಿಜಸ್ವರೂಪವನ್ನು ಅನುಭವಿಸುತ್ತಾ ಆನಂದವಾಗಿರಬೇಕು. ಹಾಗೆ ಮಾಡದೇ ಅದನ್ನು ಹೊರಗಿನ ಆಕಾಶದಲ್ಲಿ ಕಾಣುವ ಚಂದ್ರರೂಪದಲ್ಲಿ ನೋಡುವುದರಲ್ಲಿ ಆಸಕ್ತಿ ಹೊಂದಿದರೆ ಗಣೇಶನ ಮಹಿಮೆಯ ಅರಿವು ಉಂಟಾಗದೇ ಅವನ ರೂಪವನ್ನು ಹಾಸ್ಯಮಾಡುವ ದುರ್ಬುದ್ಧಿಯುಂಟಾಗುತ್ತದೆ.

ವಿಜ್ಞಾನಿಗಳ ಸೃಷ್ಟಿಯ ವಿಕಾಸಕ್ಕೂ ನಮ್ಮ ಪುರಾಣಗಳಲ್ಲಿ ಹೇಳುವ ದಶಾವತಾರ ಕಥೆಗಳಿಗೂ ಹೋಲಿಕೆಯುಂಟು. ಮೊದಲಿಗೆ ನೀರಿನಲ್ಲಿರುವ ಅವತಾರಗಳಾದರೆ, ನಂತರ ಅರ್ಧ ಪ್ರಾಣಿ ಅರ್ಧ ಮನುಷ್ಯ. ಇದರಲ್ಲಿ ಗಣಪತಿಯೂ ಒಂದಾಗಿದೆ. ಗ್ರೀಕರ ಕಲ್ಪನೆಯಲ್ಲಿಯೂ ಇಂತಹ ಉದಾಹರಣೆಗಳಿವೆ.

ಗಣಪತಿಯ ಮೂರ್ತಿಯ ಪೂಜೆಗೆ ಮೊದಲು ಸಗಣಿಯಿಂದ ಮಾಡಿ ಅದರ ಮೇಲೆ ಗರಿಕೆಯನ್ನಿಟ್ಟು ಅದನ್ನು ಪಿಳ್ಳೇರಾಯನೆಂದು ಕರೆದು ಅದಕ್ಕೆ ಪೂಜಿಸುವರು. ಮಿಕ್ಕೆಲ್ಲ ದೇವರುಗಳಂತೆ ಇದಕ್ಕೂ ಷೋಡಶಾಂಗ ಪೂಜಾವಿಧಾನದ ರೀತ್ಯಾ ಪೂಜಿಸುವರು. ಪೂಜೆಯ ನಂತರ ಹತ್ತುದಿನಗಳವರೆವಿಗೆ ನಿತ್ಯ ಪೂಜೆಯನ್ನು ಮಾಡಿ ೧೦ನೆಯ ದಿನ ಅಂದರೆ ಅನಂತ ಚತುರ್ದಶಿಯ ದಿನದಂದು ವಿಸರ್ಜನೆ ಮಾಡುವರು.

ದೇಶದ ವಿವಿದೆಡೆ ವಿವಿಧ ರೀತಿಯಲ್ಲಿ ಗಣಪತಿಯ ಹಬ್ಬವನ್ನಾಚರಿಸುವರು. ದಕ್ಷಿಣ ದೇಶದಲ್ಲಿ ಮನೆ ಮನೆಗಳಲ್ಲಿ ಗಣಪತಿಯ ಮೂರ್ತಿಗೆ ಪೂಜಿಸಿದರೆ, ಮಹಾರಾಷ್ಟ್ರದಲ್ಲಿ ಸ್ವಾತಂತ್ರ್ಯ ಸಂಗ್ರಾಮದ ಸಮಯದಲ್ಲಿ ಜನಗಳನ್ನು ಒಗ್ಗೂಡಿಸಲು ಆರಂಭಿಸಿದ ಸಾರ್ವಜನಿಕ ಗಣಪತಿ ಪೂಜೆ ಇಂದಿಗೂ ಹಾಗೆಯೇ ಮುಂದುವರೆಯುತ್ತಿದೆ.

ಏಕದಂತಾಯ ವಿದ್ಮಹೇ ವಕ್ರತುಂಡಾಯ ಧೀಮಹಿ ತನ್ನೋ ದಂತಿ: ಪ್ರಚೋದಯಾತ್

ವಿಭಾಗಗಳು
ಲೇಖನಗಳು

ಸ್ವಾತಂತ್ರ್ಯ ಸೇನಾನಿಗಳಿಗೊಂದು ನಮನ

1975-76ರಲ್ಲಿ ಎಸ್.ಎಸ್.ಎಲ್.ಸಿ. ಪಾಸಾದ ನನ್ನ ಮುಂದಿನ ಶಿಕ್ಷಣದ ಬಗ್ಗೆ ಆಗ ತಾನೇ ನಿವೃತ್ತರಾಗಿದ್ದ ನನ್ನ ತಂದೆಗೆ ಚಿಂತೆಯಾಗಿತ್ತು. ಅವರ ಸೋದರಮಾವನವರಾಗಿದ್ದ (ಕನ್ನಡ ಪ್ರೊಫೆಸರ್ ಆಗಿ ನಿವೃತ್ತರಾಗಿದ್ದರು) ಕೆ.ವೆಂಕಟರಾಮಪ್ಪನವರ ಬಳಿಯಲ್ಲಿ ಸಹಾಯಕ್ಕೆಂದು ಹೋಗಿದ್ದರು. ಅವರಲ್ಲಿ ವಿಷಯವನ್ನು ಅರುಹಿದಾಗ, ಅವರು ಮೊದಲಿಗೆ ತಮ್ಮ ಮನೆಯಲ್ಲಿಯೇ ಬಿಟ್ಟಿರಲು ಹೇಳಿದ್ದರು. ಅದಕ್ಕೆ ನನ್ನ ತಂದೆ ಒಪ್ಪದಿದ್ದಾಗ, ಹೊಯ್ಸಳ ಕರ್ನಾಟಕ ಹಾಸ್ಟೆಲ್‍ಗೆ ಸೇರಿಸು, ಕೃಷ್ಣ ವಟ್ಟಂ ಅವರಿಗೆ ಪತ್ರ ಬರೆದುಕೊಡ್ತೀನಿ ಅಂದಿದ್ದರು. ಇವನ ಓದಿಗೆ ಹೇಗಪ್ಪಾ ಹಣ ಹೊಂದಿಸುವುದು ಅಂತ ಯೋಚಿಸ್ತಿದ್ದಾಗ, ವೆಂಕಟರಾಮಪ್ಪನವರೇ ಮತ್ತೆ ಕೇಳಿದರು. ’ಅಲ್ಲಯ್ಯಾ! ಈಗ ನಿನಗೆ ಪಿಂಚಣಿಯೂ ಇಲ್ಲ. ಇನ್ನೂ ಎರಡು ಮಕ್ಕಳ ಓದು, ಮಗಳ ಮದುವೆ ಅಂತೆಲ್ಲಾ ಬಹಳ ಖರ್ಚಿದೆ. ಮುಂದೆ ಹೇಗೆ ಜೀವನ ನಡೆಸ್ತಿಯಾ? ಅದರ ಬಗ್ಗೆ ಏನಾದರೂ ಯೋಚಿಸಿದ್ದೀಯಾ?’ ಅದಕ್ಕೆ ನಮ್ಮ ಅಪ್ಪನಿಂದ ನಕಾರ ಬರಲು, ಅವರೇ ಮತ್ತೆ ಕೇಳಿದರು, ’1941-42ರ ಸಮಯದಲ್ಲಿ ನೀನು ಮನೆ ಬಿಟ್ಟು ಹೋಗಿದ್ದೆ ಅಲ್ವ’? [(3 ತಿಂಗಳ ಮಗುವಿನಿಂದ ನಮ್ಮ ತಂದೆ ಬೆಳೆದದ್ದೇ ಅವರ ಮನೆಯಲ್ಲಿ). ಬ್ರಿಟಿಷರ ವಿರುದ್ಧ ಕ್ವಿಟ್ ಇಂಡಿಯಾ ಚಳುವಳಿ ಅದಾಗಿದ್ದು, ಆಗ ನಮ್ಮ ತಂದೆ ತಮ್ಮ ಮಿತ್ರರೊಂದಿಗೆ ಪೆನುಕೊಂಡೆಯ ಗಗನಮಹಲ್ ಸುಟ್ಟಿದ್ದರು. ಆ ಘಟನೆ ಪೊಲೀಸ್ ಕೇಸ್ ಆಗಿ, ಇವರೆಲ್ಲರನ್ನೂ ಜೈಲಿಗೆ ತಳ್ಳಿದ್ದರು.] ’ಅದರ ಬಗ್ಗೆ ಸ್ವಲ್ಪ ಹೇಳು’ ಎನ್ನಲು, ನಮ್ಮ ತಂದೆ ಆ ಘಟನೆ ಎಲ್ಲವನ್ನೂ ಹೇಳಿದರು (ಆ ಘಟನೆ ಬಗ್ಗೆ ನಮ್ಮ ತಂದೆ ಹೇಳ್ತಿದ್ದದ್ದು, ಅದೊಂದು ಪುಂಡಾಟಿಕೆ. ಅದರ ಬಗ್ಗೆ ಸವಿಸ್ತಾರವಾಗಿ ಈ ಕೆಳಗೆ ಬರೆದಿರುವೆ). ಆಗ ಅವರು ಪ್ರತಿಯಾಗಿ, ’ಅಲ್ಲಯ್ಯಾ, ಈ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ್ದೀಯ. ನಿನಗೇನಾದರೂ ಪಿಂಚಣಿ, ಮರ್ಯಾದೆ ಏನಾದರೂ ಸಿಕ್ಕಿದೆಯಾ? ಇಲ್ಲ. ಇದರ ಬಗ್ಗೆ ನೀನ್ಯಾಕೆ ಯೋಚಿಸಬಾರದು ಎನ್ನಲು, ನನ್ನ ತಂದೆ, ’ಅದೇಮೋ ಮಾವ, ನಾಕೇಮೀ ತೆಲೀದು, ನುವ್ವೇ ಏಮನ್ನಾ ಚೇವಲಾ’ ಅಂದರು.

ಆಗ ವೆಂಕಟರಾಮಪ್ಪನವರು, ಒಮ್ಮೆ ತಮ್ಮ ಶಿಷ್ಯರಾಗಿದ್ದ, ಆಗ ಕೇಂದ್ರ ಸರಕಾರದಲ್ಲಿ ರಾಜ್ಯ ಗೃಹ ಸಚಿವರಾಗಿದ್ದ ಎಫ್.ಎಚ್.ಮೊಹಿಸೀನ್ ಅವರಿಗೆ ಪತ್ರ ಬರೆದು, ತನ್ನ ಸೋದರಳಿಯನಿಗೆ ಸ್ವಾತಂತ್ರ್ಯ ಸೇನಾನಿಗಳಿಗೆ ಕೊಡಲಾಗುವ ಪಿಂಚಣಿ ಕೊಡಿಸುವಂತೆ ಕೋರಿಕೊಂಡಿದ್ದರು.

ವೆಂಕಟರಾಮಪ್ಪನವರು ಪತ್ರ ಬರೆದ ಮೂರು-ನಾಲ್ಕು ತಿಂಗಳುಗಳಲ್ಲಿ ನಮ್ಮ ತಂದೆಗೆ ಸ್ವಾತಂತ್ರ್ಯ ಯೋಧರ ಪಿಂಚಣಿ ಮಂಜೂರಾಗಿತ್ತು. ಕೇಂದ್ರ ಸರಕಾರದ ಮಾಹೆಯಾನ 300 ರೂಪಾಯಿ ಪಿಂಚಣಿ ಆದರೆ, ಕರ್ನಾಟಕ ರಾಜ್ಯ ಸರ್ಕಾರದ 75 ರೂಪಾಯಿಗಳೂ ಬರುತ್ತಿತ್ತು. ಅದಲ್ಲದೇ ನನ್ನ ಹಾಸ್ಟೆಲ್ ವೆಚ್ಚ, ಪುಸ್ತಕಗಳ ವೆಚ್ಚ, ಕಾಲೇಜು ಫೀ ಮಾಫಿ ಇತ್ಯಾದಿಗಳೂ ಮಂಜೂರಾಗಿದ್ದವು. ನಮ್ಮೂರಿನ ಹತ್ತಿರದ ತಾಲೂಕಾದ ಚಳ್ಳಕೆರೆಯಲ್ಲಿ ಅವರಿಗೆ ಶಾಲು ಹೊದಿಸಿ ಸನ್ಮಾನವನ್ನೂ ಮಾಡಿದ್ದರು. ನೋಡಿ, ದೈವ ಲೀಲೆ ಅಂದ್ರೆ ಹಾಗೆ. ಸ್ವಲ್ಪ ತಿಂಗಳ ಹಿಂದೆ ಯಾರೂ ತಿಳಿಯರಿಯದ, ಎರಡು ಹೊತ್ತಿನ ಊಟಕ್ಕೂ ಪರದಾಡಬೇಕಿದ್ದ ಜೀವಿಗೆ, ಅಂದು ರಾಜ ಸನ್ಮಾನ! ಅವರು ನಿಧನರಾದಾಗ, ಅಂತ್ಯಕ್ರಿಯೆಯ ಮುಂಚೆ ಪಾರ್ಥಿವ ಶರೀರದ ಮೇಲೆ ರಾಷ್ಟ್ರ ಧ್ವಜವನ್ನು ಇಟ್ಟಿದ್ದರು. ನನ್ನ ತಾಯಿ ನಿಧನರಾದಾಗಲೂ ಅದೇ ಮರ್ಯಾದೆ ಕೊಟ್ಟಿದ್ದರು.

ಪಿಂಚಣಿ ಮಂಜೂರಾತಿ ವಿಷಯದ ಬಗ್ಗೆ ಸ್ವಲ್ಪ ಮಾಹಿತಿ ಕೊಡುವೆ. ದಾಖಲೆಗಳು ಸರಿಯಾಗಿ ಇರದಿದ್ದ ಕಾರಣ ಪಿಂಚಣಿ ಮಂಜೂರಾತಿ ಸುಲಭವಾಗಿರಲಿಲ್ಲ. ಆದರೂ ಬಹಳ ಸುಲಭವೆನ್ನುವಂತೆ ಮಾಡಿದ್ದರು. ಅದು ಹೇಗಾಯ್ತು ಅಂದ್ರೆ, 1941-42ರ ಸಮಯವದು. ಆಗ ಸ್ವಾತಂತ್ರ್ಯ ಸಂಗ್ರಾಮದ ಉತ್ತುಂಗ ಸಮಯ. ದೇಶದಲ್ಲೆಲ್ಲಾ ದೇಶಭಕ್ತರು ಬ್ರಿಟಿಷ ಆಳ್ವಿಕೆಯ ವಿರುದ್ಧ ಹೋರಾಡುತ್ತಿದ್ದರು. ಆಂಧ್ರಪ್ರದೇಶದ ಪೆನುಕೊಂಡೆಯಲ್ಲಿ ಲಲಿತ ಮಹಲ್ ಎಂಬ ಬ್ರಿಟಿಷರ ಒಂದು ಕಟ್ಟಡವಿತ್ತು. ನನ್ನ ತಂದೆಯ ಜೊತೆ ಇನ್ನು ಮೂವರು ಸೇರಿ ರಾತ್ರಿಯ ಹೊತ್ತಿನಲ್ಲಿ ಅದಕ್ಕೆ ಬೆಂಕಿ ಹಚ್ಚಿ ಸುಟ್ಟಿದ್ದರು. ಆ ಕಾರಣ ಇವರು ನಾಲ್ವರನ್ನೂ ಪೊಲೀಸರು ದಸ್ತಗಿರಿ ಮಾಡಿ ಜೇಲಿನಲ್ಲಿಟ್ಟಿದ್ದರು. ಸುಮಾರು ಒಂದು ವರ್ಷದ ಅವಧಿಯಲ್ಲಿ, ಕೆಲವು ಕಾಲ ಅನಂತಪುರ, ಕೆಲವು ಕಾಲ ಕಡಪ, ಇನ್ನು ಕೆಲವು ಕಾಲ ಕರ್ನೂಲಿನ ಜೇಲಿಗಳಲಿಟ್ಟಿದ್ದರು. ಕೋರ್ಟಿನಲ್ಲೂ ಇದರ ಬಗ್ಗೆ ವಿಚಾರಣೆ ನಡೆಯುತ್ತಿತ್ತು. ಆ ಸಮಯದಲ್ಲಿ ಪೆನುಕೊಂಡೆಯ ಪೊಲೀಸ್ ಸ್ಟೇಷನ್ನಿಗೆ ಸಬ್ ಇನ್ಸ್‍ಪೆಕ್ಟರ್ ಒಬ್ಬರು ಹೊಸದಾಗಿ ಬಂದಿದ್ದರು. ಕೈದಿಗಳೆಲ್ಲರ ಕುಟುಂಬದ ಬಗ್ಗೆ ವಿಚಾರಿಸುತ್ತಿದ್ದರು. ನಮ್ಮ ತಂದೆಯ ಸರದಿ ಬಂದಾಗ, ’ಯಾರ ಮನೆಯವನು, ನೀನು?’ ಎಂದದ್ದಕ್ಕೆ ಇವರು ’ಕೋಟಗುಡ್ಡ ಸುಬ್ಬಾಶಾಸ್ತ್ರಿಗಳ ಮೊಮ್ಮಗ’ ಅಂದ್ರಂತೆ. ಅದಕ್ಕೆ ಪ್ರತ್ಯುತ್ತರವಾಗಿ, ’ಅಲ್ಲಯ್ಯಾ, ಅವರು ನನ್ನ ಗುರುಗಳು. ಅಂತಹವರ ಮನೆಯವನಾಗಿ ನೀನು ಜೈಲಿಗೆ ಬರೋದಾ! ನಡೆ ನಡೆ’ ಅಂತ ಜೈಲಿನಿಂದ ಮನೆಗೆ ಕಳುಹಿಸಿದ್ದರಂತೆ. ಆಗಿನ್ನೂ ಕೋರ್ಟಿನಲ್ಲಿ ವಿಚಾರಣೆ ನಡೆಯುತ್ತಿತ್ತು. ಮುಂದಿನ ಕೋರ್ಟಿನ ವಿಚಾರಣೆ ಇವರು ಗೈರಾಗಿದ್ದರು. ಹಾಗಾಗಿ ಕೋರ್ಟಿನ ಮುಂದಿನ ವಿಚಾರಣೆಯ ದಾಖಲೆಗಳಲ್ಲಿ ಇವರ ಬಗ್ಗೆ ಉಕ್ತವಾಗಿರಲಿಲ್ಲ. ಇವರನ್ನು ಬಿಟ್ಟ ಸ್ವಲ್ಪವೇ ದಿನಗಳಲ್ಲಿ, ಕೋರ್ಟಿನ ವಿಚಾರಣೆಯೂ ಮುಗಿದು, ಇತರರನ್ನೂ ಜೈಲಿನಿಂದ ಮುಕ್ತಿಗೊಳಿಸಿದ್ದರಂತೆ. ಹಾಗಾಗಿ ಸ್ವಾತಂತ್ರ್ಯ ಬಂದ ನಂತರ ಎಲ್ಲರನ್ನೂ ಸ್ವಾತಂತ್ರ್ಯ ವೀರರೆಂದು ಪರಿಗಣಿಸಿದರೂ, ಇವರನ್ನು ಮಾತ್ರ ಹಾಗೆ ಪರಿಗಣಿಸಿರಲಿಲ್ಲ. ರಾಜ್ಯ ಗೃಹ ಮಂತ್ರಿಗಳ ಆದೇಶದ ಮೇರೆಗೆ, ಪಿಂಚಣಿ ಪಡೆಯುತ್ತಿದ್ದ ಆ ಇನ್ನು ಮೂವರ ದಾಖಲೆಗಳ ಆಧಾರದ ಮೇಲೆ ಇವರ ದಾಖಲೆಯನ್ನು ಸೃಷ್ಟಿಸಿದ್ದರು. ನಿಜಕ್ಕೂ ಇಷ್ಟೆಲ್ಲಾ ಕೆಲಸ ಆಗುತ್ತದೆ ಎಂಬ ನಿರೀಕ್ಷೆ ನಮಗಿರಲಿಲ್ಲ.

ನನ್ನ ತಂದೆ ಆಗಾಗ್ಯೆ ಹೇಳುತ್ತಿದ್ದ ಒಂದು ಘಟನೆ ನೆನಪಾಗುತ್ತಿದೆ. ನನ್ನ ತಂದೆ ಜೈಲಿನಲ್ಲಿದ್ದಾಗಲೇ, ಒಬ್ಬ ಪಂಜಾಬಿಯನ್ನೂ ಸೆರೆಹಿಡಿದಿದ್ದರಂತೆ. ಆತ ಸೇನೆಯಲ್ಲಿ ಯೋಧನೆಂಬುದು ಪೊಲೀಸರಿಗೆ ಆಗ ತಿಳಿಯದು. ಆತ ಯೋಧನೆಂದು ಹೇಳಿದ್ದರೂ ನಂಬದೇ, ಕಿಡಿಗೇಡಿಯೆಂದೂ ಸ್ವಾತಂತ್ರ್ಯ ಹೋರಾಟಗಾರರಲ್ಲೊಬ್ಬನೆಂದೂ ಸೆರೆಮನೆಯಲ್ಲಿ ಇಟ್ಟಿದ್ದರಂತೆ. ಆತನ ಹಿರಿಯ ಅಧಿಕಾರಿಗಳಿಂದ ಆತನ ಬಗ್ಗೆ ಸಮಜಾಯಿಶಿ ಬರುವುದು ಸ್ವಲ್ಪ ದಿನಗಳೇ ಹಿಡಿದುವು. ಅದಾದ ನಂತರ ಆತನ ಕ್ಷಮೆ ಕೇಳಿ ಪೊಲೀಸರು ಬಿಟ್ಟಿದ್ದರಂತೆ. ಆತ ಸೆರೆಯಲ್ಲಿದ್ದಾಗ ಪ್ರತಿ ನಿತ್ಯವೂ ಆತನಿಗೆ ಪೂರಿ ಮತ್ತು ಶ್ರೀಖಂಡ ಬೇಕಿತ್ತಂತೆ. ಅಲ್ಲಿಯ ಜೇಲಧಿಕಾರಿಗಳು ಎಲ್ಲರಿಗೂ ಕೊಡುವಂತೆ ಅವನಿಗೂ ಚಪಾತಿ, ಅನ್ನ ಕೊಡುತ್ತಿದ್ದರಂತೆ. ಸ್ವಲ್ಪ ದಿನಗಳಲ್ಲಿ ಆತನ ಕೋರಿಕೆಯಂತೆ ಪೂರಿ ಶ್ರೀಖಂಡ ತರಿಸಿಕೊಟ್ಟಿದ್ದರಂತೆ. ಆತ ಇವರುಗಳೊಂದಿಗೆ ಹಂಚಿ ತಿಂದಾಗ, ಅಲ್ಲಿಯವರೆವಿಗೂ ಜೀವನದಲ್ಲಿ ಪೂರಿ ಶ್ರೀಖಂಡ ತಿನ್ನದಿದ್ದವರಿಗೆ ಇವರಲ್ಲಿ ಆಗ ಹಬ್ಬದ ವಾತಾವರಣವಂತೆ. ಆತನ ದಿರಿಸಿನಲ್ಲಿ ನಾಲ್ಕೈದು ಕಡೆ ಪಾಕಿಟುಗಳಿದ್ದು, ಎಲ್ಲದರಲ್ಲೂ ಹತ್ತರ, ನೂರರ ನೋಟುಗಳಿದ್ದುವಂತೆ.

ವಿಭಾಗಗಳು
ಲೇಖನಗಳು

ಶಾಮರಾಯರು

ಶ್ರೀರಾಮನ ಪರಮ ಭಕ್ತ, ಆಶುಕವಿ, ಶ್ರೀ ದೊಡ್ಡಸುಬ್ಬಣ್ಣನವರ ಮನೆಯೊಂದು ನಂದಗೋಕುಲ.
ಅವರ ಮಕ್ಕಳ ಹೆಸರುಗಳೆಂದರೆ ರಾಮಸ್ವಾಮಿ, ಲಕ್ಷ್ಮಣ, ಶಾಮರಾಯ, ಹನುಮಂತರಾಯ ಇತ್ಯಾದಿ. ಅವರೆಲ್ಲರೂ ಜೀವನದಲ್ಲಿಯೂ ಅದೇ ಪಾತ್ರಗಳನ್ನೇ ರೂಢಿಸಿಕೊಂಡಿದ್ದವರು. ಅವರ ದೊಡ್ಡ ಮಗ ತಳುಕಿನ ವೆಂಕಣ್ಣಯ್ಯನವರು ಕನ್ನಡ ನಾಡಿಗೆ ಚಿರಪರಿಚಿತ. ಕನ್ನಡದ ಮೊದಲ ಪ್ರೊಫೆಸರ್ ಆಗಿದ್ದವರು. ಮೊತ್ತ ಮೊದಲ ಕನ್ನಡ ಎಂಎ ತರಗತಿಯಲ್ಲಿದ್ದ ಕುವೆಂಪುರವರು ಅವರ ಮೆಚ್ಚಿನ ಶಿಷ್ಯರು. ಹಾಗೆಯೇ ಎಸ್.ವಿ.ಪರಮೇಶ್ವರ ಭಟ್ಟರೂ ಕೂಡ.

ದೊಡ್ಡ ಸುಬ್ಬಣ್ಣನವರ ಇನ್ನೊಬ್ಬ ಮಗನಾದ ಶ್ರೀ ತ.ಸು.ಶಾಮರಾಯರು ಕೂಡ ಕನ್ನಡದ ಪ್ರೊಫೆಸರ್ ಆಗಿದ್ದವರು. ಇಂದು ಅವರ ಜನುಮದಿನ. ಶ್ರೀ ಕೃಷ್ಣ ಹುಟ್ಟಿದ ದಿನದಂದೇ ಹುಟ್ಟಿದವರಂತೆ. ಅದಕ್ಕೇ ಅವರಿಗೆ ಶಾಮ ಎಂಬ ಹೆಸರು ಇಟ್ಟಿದ್ದುದು. ಚಿಕ್ಕ ವಯಸ್ಸಿನಿಂದ ಬಹಳ ಕಷ್ಟದಲ್ಲಿ ಬೆಳೆದು ಬಂದವರು. ಇಂಟರ್ ಮೀಡಿಯಟ್ ನಲ್ಲಿ ಮೊತ್ತ ಮೊದಲ ಸ್ಥಾನ ಪಡೆದವರು, ಹಾಗೂ ಬಿಎ ಹಾನರ್ಸ್‍ನಲ್ಲಿ ರ‍್ಯಾಂಕ್ ಬಂದಿದ್ದು, ಭಾಸ್ಕರ ರಾಯರ ಚಿನ್ನದ ಪದಕ ಮತ್ತು ಚಾವುಂಡರಾಯ ಪ್ರಶಸ್ತಿ ಕೂಡಾ ಪಡೆದುಕೊಂಡಿದ್ದರು. ಶಾಲಾ ಮಾಸ್ತರರಾಗಿ ಮುಂದೆ ಓದಿ, ಕನ್ನಡ ಎಂಎ ಮಾಡಿದವರು. ಅವರ ಗುರುಗಳಾದ ಕುವೆಂಪುರವರಿಗೆ ಪಟ್ಟ ಶಿಷ್ಯ. ಉತ್ತಮ ಗುರುವಿಗೆ ಉತ್ತಮ ಶಿಷ್ಯ. ಕನ್ನಡದಲ್ಲಿ ವೀರಶೈವ ಸಾಹಿತ್ಯದಲ್ಲಿ ಉತ್ತಮ ಕೃತಿಗಳನ್ನು ತಂದಿತ್ತವರು. ಕನ್ನಡ ಸಾಹಿತ್ಯಕ್ಕೆ ಅವರ ಕೊಡುಗೆಯ ಬಗ್ಗೆ ಬರೆಯಲು ನಾನು ಅಶಕ್ತ. ಆದರೂ ಕೆಲ ಕಾಲ ಅವರನ್ನು ದೂರದಿಂದ ನೋಡಿದವನು ಮತ್ತು ಅವರ ಮನೆಯ ಅನ್ನ ತಿಂದ ಋಣಿಯಾದ ನನಗೆ ಅವರ ಬಗ್ಗೆ ಎರಡಕ್ಷರ ಬರೆಯುವ ತವಕ.

ಶಾಮರಾಯರದ್ದು ಬಹಳ ಶಿಸ್ತಿನ ಜೀವನ. ಅವರ ಹಾಗೆಯೇ ಅವರ ಮಕ್ಕಳೂ ಅವರವರ ಕ್ಷೇತ್ರಗಳಲ್ಲಿ ಉತ್ತಮ ಹೆಸರನ್ನು ಗಳಿಸಿದವರು. ಅವರು ತಮ್ಮ ಮಕ್ಕಳಿಗೆ ಜೀವ ಕೊಟ್ಟರೇ ಹೊರತು, ಕೈಲಾಗಿದ್ದರೂ ಜೀವನ ಕೊಡಲಿಲ್ಲ. ಎಲ್ಲ ಮಾನವರೂ ಕಲಿಯಬೇಕಾದ ಇದೊಂದು ಜೀವನದ ಉತ್ತಮ ಪಾಠ.

ಸಾವಿರಾರು ಮಂದಿಗೆ ತ್ರಿದಾಸೋಹದಾತರಾಗಿದ್ದವರು. ಅವರ ಬಳಿಗೆ ಬಂದವರು ಅವರ ಶಿಷ್ಯರೇ ಆಗಬೇಕೆಂದಿರಲಿಲ್ಲ. ಅವರನ್ನು ನಂಬಿ ಬಂದವರಿಗೆ ಅನ್ನ, ವಸತಿ ಮತ್ತು ವಿದ್ಯೆಯನ್ನು ಕೊಟ್ಟು ಉತ್ತಮ ಪ್ರಜೆಗಳನ್ನಾಗಿ ಮಾಡಿದವರು. ಅವರ ಶಿಷ್ಯಂದಿರಲ್ಲಿ ಹೇಳಬಹುದಾದ ಕೆಲವು ಹೆಸರುಗಳೆಂದರೆ, ಶ್ರೀ ಜಿ.ಎಸ್. ಶಿವರುದ್ರಪ್ಪನವರು, ಎನ್.ಎಸ್. ಲಕ್ಷೀನಾರಾಯಣ ಭಟ್ಟರು ಇತ್ಯಾದಿ. ಶಿವರುದ್ರಪ್ಪನವರು ಶಾಮರಾಯರಿಗೆ ಗುರುಕಾಣಿಕೆಯಾಗಿ ’ಎದೆ ತುಂಬಿ ಹಾಡಿದೆನು’ ಎನ್ನುವ ಕವನವನ್ನು ಬರೆದಿದ್ದರಂತೆ. ಇನ್ನು ಲಕ್ಷ್ಮೀನಾರಾಯಣ ಭಟ್ಟರಂತೂ ಶಾಮರಾಯರಿಗೆ ಮಗನಂತೆಯೇ ಇದ್ದರು. ನಾನು ನೋಡಿದ ಒಂದು ಘಟನೆ. ಶಾಮರಾಯರು ದೈವ ಅಧೀನರಾದ ಬಳಿಕದ 10ನೆಯ ದಿನ ಧರ್ಮೋದಕಕ್ಕೆಂದು ಅವರೂ ಬಂದಿದ್ದರು. ಪುರೋಹಿತರು ಧರ್ಮೋದಕ ಕೊಡಿಸುವಾಗ, ಮೃತರಿಗೆ ಯಾವ ರೀತಿಯ ಸಂಬಂಧಿಗಳೆಂದು ಕೇಳುತ್ತಿದ್ದರು. ಭಟ್ಟರ ಸರದಿ ಬಂದಾಗ, ಭಟ್ಟರು ಅವರು ನನ್ನ ತಂದೆ ಅಂದಿದ್ದರು. ಅಲ್ಲಿದ್ದ ನಾವೆಲ್ಲರೂ ಅವಾಕ್ಕಾಗಿದ್ದೆವು. ಇನ್ನೂ ಎಷ್ಟೊ ಮಂದಿ ಅವರಿಗೆ ಋಣಿಗಳಾಗಿದ್ದಾರೆ.

ಅವರೊಬ್ಬ ಉತ್ತಮ ಅಧ್ಯಾತ್ಮಿಕ ಚಿಂತಕ. ಅವರು ದೈವೀ ಉಪಾಸಕರು. ದೈವೀ ಶಕ್ತಿ ಅವರಿಗೆ ಸಿದ್ಧಿಸಿತ್ತಂತೆ. ಲಲಿತಾದೇವಿಯ ಬೀಜಾಕ್ಷರ ಮಂತ್ರವನ್ನು ಹಲವರಿಗೆ ಉಪದೇಶಿಸಿದ್ದರಂತೆ. ಪ್ರತಿ ನಿತ್ಯ ದೇವರ ಪೂಜೆ ಮಾಡಿ ಮಂಗಳಾರತಿ ಮಾಡಿದವರು, ತನ್ನ ಅಣ್ಣ ವೆಂಕಣ್ಣಯ್ಯನವರ ಭಾವಚಿತ್ರಕ್ಕೂ ಮಂಗಳಾರತಿ ಮಾಡುತ್ತಿದ್ದರಂತೆ. ವೆಂಕಣ್ಣಯ್ಯನವರು ಲೌಕಿಕ ಲೋಕದಿಂದ ಬಹಳ ಎತ್ತರಕ್ಕೆ ಏರಿದ ಜೀವಿ. ಯಾವ ಕೃತಿಗೂ ಅವರು ಶ್ರೇಯ ತೆಗೆದುಕೊಳ್ಳದವರು. ಅವರನ್ನು ಅವರ ಕೃತಿಗಳನ್ನು ಈ ಲೌಕಿಕ ಪ್ರಪಂಚಕ್ಕೆ ಪರಿಚಯಿಸಿದವರು, ಶಾಮರಾಯರು.

ವೃತ್ತಿಯಿಂದ ನಿವೃತ್ತರಾದ ಬಳಿಕ ಅವರ ಹೆಚ್ಚಿನ ಕಾಲವೆಲ್ಲಾ ಅಧ್ಯಾತ್ಮ ಚಿಂತನೆಯಲ್ಲಿಯೇ ಕಳೆದರು. ಮೈಸೂರಿನ ರಾಮಕೃಷ್ಣಾಶ್ರಮ, ಗುಬ್ಬಿ ಚಿದಂಬರಾಶ್ರಮ, ಮಲ್ಲಾಡಿಹಳ್ಳಿಯ ರಾಘವೇಂದ್ರ ಸ್ವಾಮಿಗಳ ಜೊತೆ ನಿಕಟ ಸಂಬಂಧ ಹೊಂದಿದ್ದವರು. ಗುರುಗಳ ಸಾನ್ನಿಧ್ಯದಲ್ಲಿದ್ದಾಗ ಕೈನಲ್ಲಿದ್ದದ್ದನ್ನೆಲ್ಲಾ ಕೊಟ್ಟುಬಿಡುತ್ತಿದ್ದರು. ಎಷ್ಟೋ ವೇಳೆ ಮನೆಯ ಖರ್ಚಿಗಿಲ್ಲದಿದ್ದರೂ ದಾನ ಕೊಡುವುದಕ್ಕೆ ಮೊದಲ ಪ್ರಾಶಸ್ತ್ಯ ಕೊಡುತ್ತಿದ್ದರು. ಅವರ ಬಲಗೈ ಕೊಟ್ಟದ್ದು ಎಡಗೈಗೆ ಗೊತ್ತಾಗುತ್ತಿರಲಿಲ್ಲವಂತೆ. ಅವರಿಗೆ ತಕ್ಕಂತಿದ್ದವರು ಅವರ ಧರ್ಮಪತ್ನಿ. ಯಾರೇ ಯಾವಾಗಲೇ ಅವರ ಮನೆಗೆ ಹೋದರೂ, ಊಟ ಬಡಿಸದೇ ಕಳುಹಿಸಿದವರಲ್ಲ.

ಎತ್ತರದ ವ್ಯಕ್ತಿ – ಎತ್ತರದ ವ್ಯಕ್ತಿತ್ವ ಹೊಂದಿದ್ದ ಅಣ್ಣನ ಹೆಸರನ್ನು ಇನ್ನೂ ಎತ್ತರಕ್ಕೇರಿಸಿದವರು. ಅವರ ನೆನಪಿಗೆ ’ಸವಿನೆನಪು’ ಪ್ರಕಟಿಸಿದ್ದರು. ಅಣ್ಣನ ಸಾಹಿತ್ಯಕ ಕೃತಿಗಳು, ತಮ್ಮ ಕೃತಿಗಳೊಂದಿಗೆ ಇನ್ನೂ ಹಲವರ ಕೃತಿಗಳನ್ನು ’ತಳುಕಿನ ವೆಂಕಣ್ಣಯ್ಯ ಸ್ಮಾರಕ ಗ್ರಂಥಮಾಲೆ’ಯ ಮುಖೇನ ಪ್ರಕಾಶಿಸಿದ್ದಾರೆ.

ಇಂತಹ ತಂಪು ಹೊತ್ತಿನಲ್ಲಿ ಅಂತಹ ಮಹಾನ್ ವ್ಯಕ್ತಿಯನ್ನು ನೆನೆಯಲೇ ಬೇಕು.

ವಿಭಾಗಗಳು
ಲೇಖನಗಳು

ಶ್ರೀ ಕೃಷ್ಣ ಜನ್ಮಾಷ್ಟಮಿ

ಚಾಂದ್ರಮಾನ ಪಂಚಾಗ ರೀತ್ಯಾ ಶ್ರಾವಣ ಮಾಸದ ಕೃಷ್ಣ ಪಕ್ಷದ ಅಷ್ಟಮಿಯಂದು ರೋಹಿಣಿ ನಕ್ಷತ್ರದಲ್ಲಿ ಶ್ರೀ ಕೃಷ್ಣನ ಜನ್ಮವಾಯಿತು. ಸೌರಮಾನ ಪಂಚಾಗ ರೀತ್ಯಾ ಸಿಂಹಮಾಸದಲ್ಲಿ ಶ್ರೀ ಕೃಷ್ಣನ ಜನ್ಮವಾಯಿತು. ಇದಲ್ಲದೇ ವರಾಹ ಪುರಾಣದ ಪ್ರಕಾರ ಶ್ರೀ ಕೃಷ್ಣ ಜನ್ಮವು ಆಷಾಢ ಮಾಸದ ಶುಕ್ಲಪಕ್ಷದ ದ್ವಾದಶಿಯಂದು ಆಯಿತು. ಆ ಸಂದರ್ಭದಲ್ಲಿ ಚಾಂದ್ರಮಾನದ ಶ್ರಾವಣ ಮಾಸವೇ ಸೌರಮಾನದ ಸಿಂಹಮಾಸವಾಗಿತ್ತು. ಸಾಮಾನ್ಯವಾಗಿ ಶ್ರಾವಣ ಮಾಸದಲ್ಲಿಯೇ ಕೃಷ್ಣ ಜನ್ಮಾಷ್ಟಮಿಯನ್ನು ಆಚರಿಸುವುದು ವಾಡಿಕೆ. ದೇಶದ ವಿವಿಧ ಪ್ರದೇಶಗಳಲ್ಲಿ ತಮ್ಮದೇ ವೈಖರಿಯಲ್ಲಿ ಶ್ರೀಕೃಷ್ಣನನ್ನು ಆರಾಧಿಸುವರು, ಪೂಜಿಸುವರು. ಇದೇ ದಿನವನ್ನು ಗೋಕುಲಾಷ್ಟಮಿಯೆಂದೂ, ಶ್ರೀ ಕೃಷ್ಣ ಜಯಂತಿಯೆಂದೂ, ಜನ್ಮಾಷ್ಟಮಿಯೆಂದೂ ಕರೆಯುವರು. ವರಾಹ ಪುರಾಣದಲ್ಲಿ ಉಲ್ಲೇಖಿಸಿದಂತೆ, ಅಂದು ರಾತ್ರಿ ಸ್ತ್ರೀಯು ಪತಿಯೊಡನೆ ಉಪವಾಸವಿದ್ದು ವ್ರತವನ್ನಾಚರಿಸಿದರೆ ಅವಳ ಹೃದಯದಲ್ಲಿ ಭಗವಂತನು ಕಾಣಿಸಿಕೊಳ್ಳುವನು. ಅಂತಹವರಿಗೆ ಒಳ್ಳೆಯ ಸಂತಾನ ಮತ್ತು ಸಂಪತ್ತು ದೊರೆಯುತ್ತದೆ ಎಂದು ಹೇಳಿದೆ. ‘ತಿಥಿತತ್ವ’ ಎಂಬ ಗ್ರಂಥದಲ್ಲಿ ಜಯಂತಿಯ ಆಚರಣೆಯ ಬಗ್ಗೆ ಹೀಗೆ ಹೇಳಿದೆ – “ಜಯಂತಿ ಯೋಗವು ಒಂದು ದಿವನ ಮಾತ್ರವಿದ್ದರೆ ಅಂದೇ ಉಪವಾಸ ಪೂಜೆಯನ್ನು ಮಾಡಬೇಕು. ಆ ಯೋಗವು ಎರಡು ದಿವಸ ಇದ್ದರೆ, ಎರಡನೆಯ ದಿನದಲ್ಲಿ ವ್ರತದ ಆಚರಣೆ ಮಾಡಬೇಕು. ಜಯಂತಿ ಯೋಗವು ಇಲ್ಲದಿದ್ದರೆ ರೋಹಿಣಿ ನಕ್ಷತ್ರದಿಂದ ಕೂಡಿದ ಅಷ್ಟಮಿಯಂದು ವ್ರತವನ್ನಾಚರಿಸಬೇಕು. ಎರಡು ದಿನಗಳಲ್ಲೂ ರೋಹಿಣಿ ನಕ್ಷತ್ರಕ್ಕೆ ಸೇರಿದ ಅಷ್ಟಮಿಯಿದ್ದರೆ ಉಪವಾಸವನ್ನು ಎರಡನೆಯ ದಿನದಲ್ಲಿ ಆಚರಿಸಬೇಕು. ರೋಹಿಣಿ ನಕ್ಷತ್ರವು ಇಲ್ಲದಿದ್ದರೆ ಅರ್ಧರಾತ್ರಿಯಲ್ಲಿರುವ ಅಷ್ಟಮಿಯಲ್ಲಿ ಆಚರಿಸಬೇಕು. ಎರಡು ದಿನಗಳಲ್ಲಿಯೂ ಅಷ್ಟಮಿಯಿದ್ದರೆ ಅಥವಾ ಅಷ್ಟಮಿಯು ಎರಡು ದಿನಗಳಲ್ಲಿಯೂ ಅರ್ಧರಾತ್ರಿಯಲ್ಲಿ ಇಲ್ಲದಿದ್ದರೆ ಆಗ ಎರಡನೆಯ ದಿನದಲ್ಲಿ ವ್ರತವನ್ನಾಚರಿಸಬೇಕು. ತಿಥಿಯೋಗವಿಲ್ಲದಿದ್ದರೂ ಕೇವಲ ರೋಹಿಣೀ ನಕ್ಷತ್ರದಲ್ಲೇ ಪೂಜೆಯನ್ನು ಮಾಡಬೇಕು. ರೋಹಿಣೀ ನಕ್ಷತ್ರ ಮತ್ತು ಅಷ್ಟಮಿ ತಿಥಿ ಎರಡೂ ಒಟ್ಟಿಗೇ ಕೂಡಿ ಬರದಿದ್ದರೆ ಎರಡರಲ್ಲಿ ಯಾವುದಾದರೂ ಒಂದಕ್ಕೆ ಪ್ರಾಧಾನ್ಯ ಕೊಟ್ಟು ವ್ರತವನ್ನಾಚರಿಸಬೇಕು.

ಅಂದು ಶುದ್ಧವಾಗಿದ್ದು ಬೆಳಗಿನಿಂದ ಸಂಜೆಯವರೆವಿಗೆ ಉಪವಾಸವಿದ್ದು, ಭಕ್ತಿ ಶ್ರದ್ಧೆಗಳಿಂದ ಷೋಡಶಾಂಗ ಪೂಜೆಯನ್ನು ಶ್ರಿ ಕೃಷ್ಣ ಪರಮಾತ್ಮನಿಗೆ ಮಾಡಬೇಕು. ಇಲ್ಲಿ ಉಪವಾಸವು ಮುಖ್ಯವಾದುದು. ಉಪವಾಸವೆಂಬುದು ಶರೀರ ಶೋಷಣೆ ಮತ್ತು ಆತ್ಮಪೋಷಣೆಯಾಗಿರುತ್ತದೆ. ಅಂದು ಸಂಯಮದ ದಿವಸ. ಪರಮಾತ್ಮನ ಸಹವಾಸದಲ್ಲಿಯೇ ಇದ್ದು, ಅದಕ್ಕೆ ಸಹಾಯಕವಾಗುವಂತೆ ಇಂದ್ರಿಯಗಳಿಗೆ ಭೌತಿಕವಾಗಿ ಆಹಾರವನ್ನು ಕೊಡದೇ, ಪೂಜೆ ಮುಗಿಯುವವರೆವಿಗೆ ಉಪವಾಸವಿದ್ದು, ತದನಂತರ ಮಹಾಪ್ರಸಾದವನ್ನು ಸ್ವೀಕರಿಸಬೇಕು. ಪೂರ್ಣವಾಗಿ ಉಪವಾಸವನ್ನು ಮಾಡಲಾಗದ ಅಶಕ್ತರು ಲಘು ಆಹಾರವನ್ನು ಸೇವಿಸಬಹುದು. ರಾತ್ರಿಯೆಲ್ಲಾ ಜಾಗರಣೆ ಮಾದಿ ಪರಮಾತ್ಮ ಸ್ಮರಣೆಯನ್ನು ಮಾಡಬೇಕು. ಜಾಗರಣೆಯ ಸಮಯವನ್ನು ಭಗವಂತನ ಧ್ಯಾನ, ಸಂಕೀರ್ತನೆಗಳಿಗೆ ಮೀಸಲಾಗಿಡಬೇಕು. ದಾನದಕ್ಷಿಣೆಗಳನ್ನು ಯಥಾಶಕ್ತಿ ಸತ್ಪಾತ್ರರಿಗೆ ಕೊಡಬೇಕು. ಭಗವಂತನ ಪ್ರೀತ್ಯರ್ಥವಾಗಿ ದಾನ ಮಾಡುವುದು ಉತ್ತಮ ಕಲ್ಪವಾದರೆ ಕಾಮ್ಯವಾಗಿ (ಪ್ರತಿಫಲಾರ್ಥವಾಗಿ) ದಾನ ಮಾಡುವುದು ಸಾಮಾನ್ಯಕಲ್ಪ.

ಅಂದು ಭಗವಂತನ ಪೂಜಾಮಂಟಪವನ್ನು ರಸಭರಿತವಾದ ಹಣ್ಣು ಹೂವು ಕಾಯಿಗಳಿಂದ ಸಿಂಗರಿಸಬೇಕು. ಬಾಲಕೃಷ್ಣನ ಹೆಜ್ಜೆ ಗುರುತುಗಳನ್ನು ಹೊಸ್ತಿಲಿನಿಂದ ದೇವರ ಕೋಣೆಯವರೆಗೆ ಇರಿಸುವರು. ಶ್ರೀ ಕೃಷ್ಣನು ಬಾಲಕನ ರೂಪದಲ್ಲಿ ಮನೆಯೊಳಗೆ ಬರುವುದರ ಸೂಚನೆಯಿದು. ಅಂದು ದೇವಕೀ ದೇವಿಗಾಗಿ ಪ್ರಸವಗೃಹವನ್ನು ನಿರ್ಮಿಸುವರು. ಅದರಲ್ಲಿ ಮಂಗಳಕರವಾದ ಪೂರ್ಣಕುಂಭ, ಮಾವಿನ ಎಲೆಗಳು, ಪುಷ್ಪಮಾಲಿಕೆಗಳು, ಅಗರು ಧೂಪದ ಸುವಾಸನೆಯನ್ನು ಇರಿಸುವರು. ಹೊರಗೆ ಗೋಡೆಗಳ ಮೇಲೆ ದೇವ ಗಂಧರ್ವರು, ವಸುದೇವ, ದೇವಕಿ, ನಂದ, ಯಶೋದೆ, ಗೋಪಿಯರು, ಕಂಸನ ಕಾವಲುಗಾರರು, ಯಮುನಾದೇವಿ, ಕಾಳಿಂಗ, ಮತ್ತು ಗೋಕುಲದ ಚಿತ್ರಗಳನ್ನು ಚಿತ್ರಿಸುವರು. ಮಂಟಪದಲ್ಲಿ ಸ್ವಾಮಿಯ ಮೂರ್ತಿಯನ್ನಿಟ್ಟು ಷೋಡಶಾಂಗ ಪೂಜಾವಿಧಾನದಲ್ಲಿ ಪೂಜಿಸಿ ನೈವೇದ್ಯವನ್ನು ಅರ್ಪಿಸಬೇಕು. ೮ ಬಗೆಯ ಖಾರ ಮತ್ತು ೮ ಬಗೆಯ ಸಿಹಿ ತಿನಿಸುಗಳನ್ನು ಮಾಡಿ ಅರ್ಪಿಸುವುದು ವಾಡಿಕೆ. ಈ ಹದಿನಾರು ಬಗೆಯ ತಿನಿಸುಗಳಲ್ಲಿ ಅವಲಕ್ಕಿಯಿಂದ ಮಾಡಿದ ತಿನಿಸುಗಳಿಗೆ ವಿಶೇಷ ಪ್ರಾಧಾನ್ಯ. ಈ ಸಂದರ್ಭದಲ್ಲಿ ವಿಷ್ಣು ಪುರಾಣ, ಶ್ರೀ ಮದ್ಭಾಗವತವನ್ನು ಪಾರಾಯಣ ಮಾಡುವರು. ಮಥುರೆಯ ದೇಗುಲದಲ್ಲಿ ಅಂದು ಉತ್ಸವವನ್ನಾಚರಿಸುವರು. ಇಲ್ಲಿ ನೈವೇದ್ಯಕ್ಕಾಗಿ ೬೪ ಬಗೆಯ ತಿನಿಸುಗಳನ್ನು ಅರ್ಪಿಸುವರು. ಇದರಲ್ಲಿ ವಿಶೇಷವಾದ ಒಂದು ತಿನಿಸೆಂದರೆ ಖೋವಾಪೂರಿ. ಹಾಲು ಸಕ್ಕರೆ ಮಿಶ್ರಣ ಮಾಡಿ ಕುದಿಸಿ, ಅದರಲ್ಲಿ ಬರುವ ಕೆನೆಯನ್ನು ತೆಗೆದು – ಅದನ್ನು ಪೂರಿಯಂತೆ ತುಪ್ಪದಲ್ಲಿ ಕರಿಯುವುದು. ಇದಲ್ಲದೇ ಒರಿಸ್ಸಾದಲ್ಲಿ ಜಗನ್ನಾಥನಿಗೂ ವಿಶೇಷ ಪೂಜೆ ಆಗುವುದು.

ಮುಂಬಯಿ ಮತ್ತು ಮಹಾರಾಷ್ಟ್ರದಲ್ಲಿ ಜನ್ಮಾಷ್ಟಮಿ ಎಂದಾಚರಿಸಿ, ಬೀದಿ ಬೀದಿಗಳಲ್ಲಿ ಆಲಾರೇ ಗೋವಿಂದ ಎಂದು ಹುಡುಗ ಹುಡುಗಿಯರು ಗುಂಪು ಗುಂಪಾಗಿ ಹೋಗುವರು. ಅಲ್ಲಲ್ಲಿ ಕಟ್ಟಡಗಳ ಸಹಾಯದಿಂದ ಮೇಲೆ ಕಟ್ಟಿರುವ ಮೊಸರು ಗಡಿಗೆಯನ್ನು ಒಡೆಯುವರು. ಇದನ್ನು ದಹಿಹಂಡಿ ಎನ್ನುವರು. ಇದರ ಬಗ್ಗೆಯೇ ಒಂದು ವಿಶೇಷ ಲೇಖನವನ್ನು ಬರೆದು ಪ್ರಕಟವಾಗಿತ್ತು.

ಶ್ರೀಮನ್ನಾರಾಯಣನ ದಶಾವತಾರಗಳಲ್ಲಿ ಒಂಭತ್ತನೆಯ ಅವತಾರವೇ ಶ್ರೀ ಕೃಷ್ಣ. ಮನುಷ್ಯರಂತೆ ವ್ಯವಹರಿಸಿದರೂ, ಕಾಲಕ್ಕೆ ತಕ್ಕ ಹಾಗೆ ತನ್ನ ಅಪ್ರತಿಮ ಮತ್ತು ಅಮೋಘವಾದ ಜ್ಞಾನ, ಬಲ, ಶಕ್ತಿ, ತೇಜಸ್ಸುಗಳನ್ನೂ ಮತ್ತು ಆತ್ಮ ಗುಣ ಸಂಪತ್ತನ್ನೂ ಪ್ರದರ್ಶಿಸಿದ ಪರಮ ಪುರುಷ. ಗೋವುಗಳನ್ನೂ, ಗೋಪಾಲಕರನ್ನೂ, ಪಶು, ಪಕ್ಷಿ, ವೃಕ್ಷ, ವನಸ್ಪತಿಗಳನ್ನು ಸಂರಕ್ಷಿಸಿ ಉದ್ಧರಿಸಿದ ಪರಮಾತ್ಮ. ಮಹಾಭಾರತದ ಸೂತ್ರಧಾರ, ಭಗವದ್ಗೀತೆಯ ಮೂಲಕ ಅಧ್ಯಾತ್ಮ ತತ್ವವನ್ನು ಉಪದೇಶಿಸಿದ ಯೋಗಾಚಾರ್ಯ.

ಶ್ರೀ ಕೃಷ್ಣನು ಭಗವದ್ಗೀತೆಯಲ್ಲಿ ನೀತಿಯನ್ನೂ ಧರ್ಮವನ್ನೂ ಉಪದೇಶಿಸುತ್ತಾನೆ. ಮಥುರೆಯ ತಾಯಿ ಮತ್ತು ತಂದೆ ಸೆರೆಮನೆಯಲ್ಲಿರುವಾಗ ಅಲ್ಲಿ ಹುಟ್ಟಿದ ವಸುದೇವ-ದೇವಕಿ ಕುಟುಂಬದ ಎಂಟನೆಯ ಮಗು ಶ್ರೀ ವಾಸುದೇವ. ಗೋಕುಲದಲ್ಲಿ ಯಶೋದೆಯ ಮುದ್ದು ಪೋರನಾಗಿ ಬೆಳೆದು, ಅಕ್ಕ ಪಕ್ಕದ ಮನೆಯಲ್ಲಿಹ ಬೆಣ್ಣೆ ಕದ್ದು ತಿಂದು, ತುಂಟತನದಲ್ಲಿ ಮಕ್ಕಳಿಗೆ ಗುರುವಾಗಿದ್ದ. ಅಷ್ಟಲ್ಲದೇ ಬಾಯಲ್ಲಿ ಮಣ್ಣು ಹಾಕಿಕೊಂಡು ತನ್ನ ತಾಯಿಗೆ ವಿಶ್ವರೂಪ ದರ್ಶನ ಮಾಡಿಸಿದ ವಿಶ್ವರೂಪಿ. ಜಾಂಬವಂತನಿಂದ ಸ್ಯಮಂತಕಮಣಿಯನ್ನು ಪಡೆದ ದೈವರೂಪಿ. ವಾಸುಕಿ ಎಂಬ ಕಾಳಸರ್ಪವನ್ನು ಸಂಹರಿಸಿ ಜನಗಳನ್ನು ಸಂರಕ್ಷಿಸಿದವನು. ಬಲರಾಮನ ತಮ್ಮ ಮತ್ತು ಕುಚೇಲನ ಆಪ್ತ ಮಿತ್ರ. ಇವನಿಗೆ ಅವಲಕ್ಕಿ ಬಹು ಪ್ರಿಯವಾದ ತಿನಿಸು. ಮಹಾಭಾರತ ಕಾಳಗದಲ್ಲಿ ಕಪಟೋಪಾಯವನ್ನು ಬೋಧಿಸಿ, ಶತ್ರು ಸಂಹಾರದ ವೈವಿಧ್ಯವನ್ನು ಪರಿಚಯಿಸಿದ ಕಪಟಸೂತ್ರಧಾರಿ. ನರಕಾಸುರನನ್ನು ಸಂಹರಿಸಿ ಸಾವಿರಾರು ರಾಜರುಗಳನ್ನೂ, ಹದಿನಾರು ಸಾವಿರ ಸ್ತ್ರೀಯರನ್ನೂ ಬಿಡುಗಡೆಗೊಳಿಸಿದ ಮಹಾ ಪರಾಕ್ರಮಿ.

ಕೆಲವರ ಪ್ರಕಾರ ಶ್ರೀ ಕೃಷ್ಣನೂ ಮತ್ತು ಏಸು ಕ್ರಿಸ್ತನೂ ಒಬ್ಬನೇ. ಆದರೆ ಏಸುಕ್ರಿಸ್ತನು ಹುಟ್ಟುವ ಮುನ್ನೂರು ವರ್ಷಗಳ ಮೊದಲೇ ಭಾರತಕ್ಕೆ ಬಂದಿದ್ದ ಮೆಗಸ್ತಾನಿಸ್ ಎಂಬ ಗ್ರೀಕ್ ಚರಿತ್ರೆಕಾರ ಶ್ರೀ ಕೃಷ್ಣನ ಪೂಜೆಯ ಬಗ್ಗೆ ಉಲ್ಲೇಖಿಸಿದ್ದಾನೆ.

ವಿಭಾಗಗಳು
ಲೇಖನಗಳು

ಕುಂಕುಮ ಪುರಾಣ

ಹೆಣ್ಣು ಅಂದರೆ ಹೀಗಿರಬೇಕು ಹಣೆಯಲಿ ಕುಂಕುಮ ನಗುತಿರಬೇಕು
ಇದು ಚಲನಚಿತ್ರದ ಹಾಡು. ಆದರಿಲ್ಲಿ ಚಲನಚಿತ್ರದ ಬಗ್ಗೆ ನಾನು ಬರೆಯೋದಿಲ್ಲ. ಹಣೆಯ ಮೇಲೆ ನಗುನಗುತಿರುವ ಕುಂಕುಮದಿಂದ ಮೊಗವು ಆಕರ್ಷಕವಾಗಿರುವುದು. ಸಿಂಧೂರಮ್ ಸೌಂದರ್ಯ ಸಾಧನಂ ಎಂಬ ಉಕ್ತಿಯೊಂದಿದೆ. ಅದರ ಬಗ್ಗೆ ನನ್ನ ಚಿಂತನೆ ನಿಮ್ಮ ಮುಂದಿಡುತ್ತಿರುವೆ.

ಕುಂಕುಮ ಅಂದ ತಕ್ಷಣ ನೆನಪಿಗೆ ಬರುವುದು ಕೆಂಪು ಬಣ್ಣ. ಇದು ರಕ್ತದ ಸಂಕೇತ. ರಕ್ತವು ನಮ್ಮ ಜೀವನದಲ್ಲಿ ಅತಿ ಅವಶ್ಯಕ, ಅತ್ಯಮೂಲ್ಯ. ಹಾಗೇ ಕುಂಕುಮ ಹಿಂದೂ ಹೆಣ್ಣುಮಕ್ಕಳಿಗೆ ಅತ್ಯಮೂಲ್ಯ.

ಆಶ್ವಯುಜ ಮಾಸದ ಶುಕ್ಲ ಪಕ್ಷದ ಮೊದಲ ಹತ್ತು ದಿನಗಳು ದಸರಾ ಹಬ್ಬ. ಆಗಿನ ದಿನಗಳಲ್ಲಿ ಬೆಳಗ್ಗೆ ಪೂಜೆ ಮಾಡುವಾಗ ಲಲಿತಾ ಪರಮೇಶ್ವರಿ ಮೂರ್ತಿಗೆ ಅಥವಾ ಭಾವಚಿತ್ರಕ್ಕೆ ಲಲಿತಾ ಸಹಸ್ರನಾಮಯುಕ್ತ ಕುಂಕುಮಾರ್ಚನೆ ಮಾಡಿದರೆ ಒಳ್ಳೆಯದು ಆಗುವುದು ಎಂಬ ಪ್ರತೀತಿ ಇದೆ.
ಆಗ ಮನೆಗಳಲ್ಲಿ (ಹೆಚ್ಚಿನದಾಗಿ ದಕ್ಷಿಣ ಕರ್ನಾಟಕದಲ್ಲಿ) ಗೊಂಬೆಗಳನ್ನು ಕೂರಿಸಿ ಅವುಗಳೊಡನೆ ಮುಖ್ಯವಾಗಿ ರಾಜ ರಾಣಿ ಗೊಂಬೆಗಳನ್ನಿಟ್ಟು ಜೊತೆಗೆ ಕಲಶವನ್ನಿಟ್ಟು ಪೂಜಿಸುವರು.
ಅಲ್ಲೇ ಲಲಿತಾಮಾತೆ ಅಥವಾ ದೇವಿಗೆ ಕುಂಕುಮಾರ್ಚನೆ ಮಾಡುವರು.

ಪತ್ರಗಳನ್ನು ಬರೆಯುವಾಗ ಹೆಣ್ಣುಮಕ್ಕಳನ್ನು ಸಂಬೋಧಿಸುವಾಗ ಚಿ| ಸೌ| ಹ| ಕುಂ| ಶೋ ಎಂದು ಬರೆಯುತ್ತಾರೆ. ಅದರ ವಿಸ್ತೃತ ರೂಪ ಚಿರಂಜೀವಿ ಸೌಭಾಗ್ಯವತಿ ಹರಿದ್ರಾ ಕುಂಕುಮ ಶೋಭಿತೇ. ಹೆಣ್ಣುಮಕ್ಕಳಿಗೆ ಹಾರೈಸುವಾಗ ಚಿರಂಜೀವಿಯಾಗಿ ಅಂದರೆ ಸಾವೇ ಬರದಂತೆ ಇರು ಎಮ್ದೂ ಸೌಭಾಗ್ಯವತಿಯಾಗಿ ಅಂದ್ರೆ ಗಂಡನ ಪ್ರಾಣ ಉಳಿಸಿಕೊಂಡು ಅವನೊಡನೆ ಇರು ಎಂದೂ, ಹರಿದ್ರಾ ಕುಂಕುಮ ಶೋಭಿತೇ ಅರಿಶಿನ ಕುಂಕುಮ ಹಚ್ಚಿಕೊಂಡು ಶೋಭಿಸು ಎಂದರ್ಥ.

ಈ ಕುಂಕುಮ ಅನ್ನುವುದು ಏನು?

ಕುಂಕುಮ ಎನ್ನುವುದು ಕೆಂಪು ಬಣ್ಣದ ಪುಡಿ. ಅದನ್ನು ಅರಿಶಿನ ಮತ್ತು ಸುಣ್ಣದ ಕಲ್ಲಿನ ಪುಡಿಯ ಜೊತೆ ಸ್ವಲ್ಪ ಎಣ್ಣೆ ಹಾಕಿ ಮಿಶ್ರಣ ಮಾಡಿ ತಯಾರಿಸುವರು.

ಕುಂಕುಮವನ್ನು ಹಣೆಯ ಮಧ್ಯದಲ್ಲಿ ಇಡುವರು. ಇದು ಬುದ್ಧಿಶಕ್ತಿ, ವಿವೇಕ ಇರುವ ತಲೆಯ ಮುಂಭಾಗ. ಈ ಜಾಗ ಅಶಕ್ತರಾಗಿರುವವರನ್ನು ಸಮ್ಮೋಹನಗೊಳಿಸಲು ಸುಲಭ. ಈ ಜಾಗದಲ್ಲಿ ಉಷ್ಣ ಉತ್ಪಾದನೆ ಬಹಳವಾಗಿ ಆಗುವುದು. ತುಂಬಾ ಯೋಚಿಸುವವರು ತಲೆ ಬಿಸಿ ಆಗಿದೆ ಎನ್ನುವರು.
ಹಾಗೂ ಕೆಲವರು ಭ್ರೂಮಧ್ಯ ಭಾಗದಲ್ಲಿ ಇಟ್ಟುಕೊಳ್ಳುವರು. ಏಕಾಗ್ರತೆಗೆ ಇದು ತುಂಬಾ ಸಹಾಯಕಾರಿ.
ಇನ್ನೂ ಒಂದು ವಿಷಯವೆಂದರೆ, ಯೋಗಿಗಳು ಧ್ಯಾನದ ಮೂಲಕ ಬೆನ್ನುಹುರಿಯ ಕೆಳಭಾಗದಲ್ಲಿ ಸುಪ್ತವಾದ ಕುಂಡಲಿನೀ ಶಕ್ತಿಯ ಪ್ರಚೋದನೆ ಮಾಡುವರು. ಆ ಶಕ್ತಿ ಮೇಲೆ ಮಿದುಳಿಗೆ ಏರುವುದು. ಆಗ ಭ್ರೂ ಮಧ್ಯ ಭಾಗದಿಂದ ಹೊರ ಹೋಗುವ ಸಾಧ್ಯತೆಗಳಿರುವುದು. ಅದನ್ನು ತಡೆಯಲು ಆ ಭಾಗದಲ್ಲಿರುವ ಅಜ್ಞ ಚಕ್ರವನ್ನು ಪ್ರಚೋದಿಸುವರು. ಇದನ್ನು ಪ್ರಚೋದಿಸಲನ್ವಯ ಉಂಗುರದ ಬೆರಳಿನಿಂದ ಕುಂಕುಮವನ್ನು ಆ ಭಾಗದಲ್ಲಿ ಇಡುವರು. ಕುಂಕುಮದಲ್ಲಿ ಉಷ್ಣವನ್ನು ಶಮನ ಮಾಡುವ ಶಕ್ತಿ ಇದೆ.

ಕುಂಕುಮ ಧರಿಸಿರುವ ಹೆಣ್ಣಿನ ಮುಖವನ್ನು ಯಾರಾದ್ರು ನೋಡಿದಾಗ ಅವರ ಕಣ್ಣು ಅವಳ ಆ ಕುಂಕುಮದ ಮೇಲೆಯೇ ಕೇಂದ್ರೀಕೃತವಾಗುತ್ತೆ, ಅವಳ ಬೇರೆ ಯಾವ ಸೌಂದರ್ಯವನ್ನೂ ನೋಡಿ ಚಂಚಲಚಿತ್ತರಾಗಲು ಅವಕಾಶವಿರುವುದಿಲ್ಲ. ನಮ್ಮ ಪೂರ್ವಜರು ಕುಂಕುಮವಿಡಲು ಹೇಳುತ್ತಿದ್ದಕ್ಕೆ ಇದೂ ಒಂದು ಕಾರಣ.

ಹಿಂದೂ ಹೆಂಗಸಿನ ಜೀವನದಲ್ಲಿ ಅರಿಶಿನ ಕುಂಕುಮದ ಮಹತ್ವ ಪತಿ ಜೀವತ್ಯಾಗದ ನಂತರ ಇದನ್ನು ಯಾಕೆ ಧರಿಸಬಾರದು ಎಂಬ ಪ್ರಶ್ನೆ ಉದ್ಭಸುವುದು. ಕುಂಕುಮ ಪತಿಯ ಇರುವಿಕೆಯನ್ನು ಸೂಚಿಸುವ ಒಂದು ದ್ಯೋತಕವಷ್ಟೇ ಅಲ್ಲ. ಅದಕ್ಕೆ ಇನ್ನೂ ವಿಶೇಷ ಮಹತ್ವವಿದೆ.
ಹೆಣ್ಣಿನ ಅಂದದ ಮೇಲೆ ಇತರರ ಕಣ್ಣು ಬೀಳಬಾರದು. ಆಕೆಯ ಅಂದ ಚಂದವೆಲ್ಲಾ ಕೇವಲ ತನ್ನ ಪತಿಗೆ ಮೀಸಲು. ತಾಳಿ ಸೆರಗಿನ ಒಳಗೆ ಮುಚ್ಚಿರುವುದರಿಂದ ಮದುವೆಯಾದ ಸಂಕೇತ ಸೂಚಿಸಲು ಕುಂಕುಮದ ಉಪಯೋಗ. ರಾಮಾಯಣದ ಕಥೆಯಲ್ಲಿ ಹೇಳಿರುವಂತೆ, ಸೀತಾದೇವಿ ಅಶೋಕವನದಲ್ಲಿ ಶೋಕತಪ್ತಳಾಗಿ ಕುಳಿತಿರುವಾಗ ಆಂಜನೇಯ ರಾಮನ ಮುದ್ರಿಕೆಯನ್ನು ತೆಗೆದುಕೊಂಡು ಹೋದ. ಅಲ್ಲಿ ಸೀತೆ ಯಾರೆಂದು ಗುರುತಿಸಲಾಗಲಿಲ್ಲ. ಆದರೆ ಅವನಿಗೆ ದಿವ್ಯ ದೃಷ್ಟಿ ಇದ್ದದ್ದರಿಂದ ಸೀತೆಯ ತಾಳಿ ಗೋಚರವಾಯಿತು. ಈಗ ಕಣ್ಣಿದ್ದೇ ನಮಗೆ ಕಾಣಿಸುವುದಿಲ್ಲ, ಇನ್ನು ದಿವ್ಯದೃಷ್ಟಿ ಎಲ್ಲಿಂದ ಬರಬೇಕು. ಅದಕ್ಕಾಗಿಯೇ ಸೂಚ್ಯವಾಗಿ ಕುಂಕುಮ ಇಟ್ಟುಕೊಳ್ಳುವ ಸಂಪ್ರದಾಯ. ಆದರೂ ಆಗೋದು ಆಗೇ ಆಗತ್ತೆ, ತಡೆಯಲಾಗತ್ಯೇ?

ಕುಂಕುಮ ಹಿಂದೂ ಹೆಣ್ಣುಮಕ್ಕಳ ಸಿಂಗಾರದ ವಸ್ತುಗಳಲ್ಲೊಂದು. ಯಾರನ್ನೇ ನೋಡುವಾಗ ನಮ್ಮ ಕಣ್ಣು ಮುಡಿಯಿಂದ ಅಡಿಯವರೆವಿಗೆ ಚಲಿಸುವುದು. ಮೊದಲು ಕಾಣುವುದು ಮುಖದಲ್ಲಿನ ತಲೆಗೂದಲು. ನಂತರ ಹಣೆಯಮೇಲೆ ಕಾಣಿಸುವ ಕುಂಕುಮ. ಇದರ ಬಣ್ಣ ಹಲವಾರು. ಈಗೀಗಂತು ಬಿಂದಿಗಳು ಬಂದು ತರಹಾವರಿ ಚಿತ್ರ ವೈಚಿತ್ರವಾದ ಕುಂಕುಮಗಳನ್ನು ನೋಡಬಹುದು. ಆದರೆ ಇಂದಿನ ಹೆಣ್ಣುಮಕ್ಕಳಲ್ಲಿ ಇದನ್ನು ಕಾಣುವುದು ಬಹಳ ಕಷ್ಟ. ಇದಕ್ಕೆ ಕಾರಣವೇನೆಂದರೆ ಈಗಿನ ತರಾತುರಿ ಜೀವನದಲ್ಲಿ ಪುಡಿ ಕುಂಕುಮ ಕಾಪಾಡುವುದು ಕಷ್ಟ. ಮತ್ತು ಬೆಲ್ಲದ ಜೊತೆ ಮಿಶ್ರಣ ಮಾಡಿದ ಪಾಕದಂತಹ ಕುಂಕುಮ ಮಾಡಲು ಸಮಯವಿಲ್ಲ. ಹಾಗು ಇದೆಲ್ಲ ರೇಜಿಗೆಯ ವಿಷಯ. ಅದರ ಬದಲಾಗಿ ಸುಲಭವಾಗಿ ಅಂಗಡಿಗಳಲ್ಲಿ ಸಿಗುವ ಬೇರೆ ಬೇರೆ ಆಕಾರಗಳಿರುವ ಬಣ್ಣ ಬಣ್ಣದ ಬಿಂದಿಗಳು ಹೆಣ್ಣುಮಕ್ಕಳನ್ನು ಆಕರ್ಷಿಸಿದೆ.

ವಿದೇಶೀಯರು ಇದನ್ನು ನೋಡಿ ಅಯ್ಯೋ ಇದೇನು ನಿನ್ನ ಹಣೆಯಲ್ಲಿ ರಕ್ತ ಎಂದು ಕೇಳಿದ ಸಂದರ್ಭವೂ ಇದೆ. ಈಗೀಗ ಅವರುಗಳೂ ಇದೊಂದು ಫ್ಯಾಷನ್ ಎಂದು ಉಪಯೋಗಿಸುತ್ತಿದ್ದಾರೆ.

ಉತ್ತರ ಭಾರತೀಯರಲ್ಲಿ ತಲೆಯ ಕೂದಲ ಬೈತಲೆಯೊಂದಿಗೆ ಕುಂಕುಮವನ್ನು ಹಚ್ಚುವರು. ಇದನ್ನು ಅವರು ಸಿಂಧೂರ ಎನ್ನುವರು.

ಮೊದಲು ಬೆಲ್ಲ ಮತ್ತು ನೀರಿನೊಂದಿಗೆ ಕುಂಕುಮ ಸೇರಿಸಿ ಮಿಶ್ರಣ ಮಾಡಿ ಹಣೆಗೆ ಇಟ್ಟುಕೊಳ್ಳುತ್ತಿದ್ದರು. ಇದರಿಂದ ಕುಂಕುಮ ಬಿದ್ದು ಹೋಗುತ್ತಿರಲಿಲ್ಲ ಅಥವಾ ಅಳಿಸಿ ಹೋಗುತ್ತಿರಲಿಲ್ಲ. ಈಗೀಗ ಕುಂಕುಮವಿಡುವುದ ಕಡಿಮೆಯಾಗಿ ಬಿಂದಿ ಸಂಸ್ಕೃತಿ ಬಂದಿದೆ. ಹಾಗೇ ಹಿಂದೂಗಳಲ್ಲಿ ಇದೂ ಮಾಯವಾಗುತ್ತಿದೆ, ಆದರೆ ಕಿರಿಸ್ತಾನೀಯರಲ್ಲಿ ಮತ್ತು ಮುಸ್ಲಿಮರಲ್ಲಿ ಇದನ್ನು ಉಪಯೋಗಿಸುತ್ತಿರುವರು. ಕಿರಿಸ್ತಾನೀಯರಿಗೆ ವ್ಯಾಟಿಕನ್ ನಿಂದ ಬಂದಿರುವ ಆದೇಶ – ನೀವು ಎಲ್ಲಿರುವಿರೋ ಅಲ್ಲಿಯ ಸಂಸ್ಕೃತಿಯನ್ನು ಮೈಗೂಡಿಸಿಕೊಂಡು ಅವರಲ್ಲಿ ಒಂದಾಗಿ. ಆದ್ದರಿಂದ ಭಾರತೀಯರ ಸಂಸ್ಕೃತಿಯಾದ ಕುಂಕುಮ ಇಡುವುದನ್ನು ಅವರಲ್ಲಿ ಕಾಣಬಹುದು.

ಪತಿ ವಿಯೋಗವಾದ ಹೆಣ್ಣುಮಕ್ಕಳು, ಕಪ್ಪು ಬಣ್ಣದ ಸಾಧು ಅಥವಾ ವಿಭೂತಿಯನ್ನು ಇಡುವರು. ಇದೊಂದು ಸೂಚಕ ಅಷ್ಟೆ.

ಕುಂಕುಮದ ಮಹಿಮೆಯ ಬಗ್ಗೆ ನೃಸಿಂಹ ಸ್ತೋತ್ರದಲ್ಲೂ ಹೀಗೆ ತಿಳಿಸಿದೆ.
ಚಂದನಂ ಶೀತಲಮ್ ದಿವ್ಯಮ್ ಚಂದ್ರ ಕುಂಕುಮ ಮಿಶ್ರಿತಂ. ಆಯುರ್ವೇದದ ಪ್ರಕಾರ ಕುಂಕುಮದಲ್ಲಿ ಅರಿಶಿನದ ಗುಣವಿರುದರಿಂದ ಅದನ್ನು ಔಷಧಿಯಾಗಿ ಉಪಯೋಗಿಸುವರು. ಇದರಲ್ಲಿ ಶಮನ ಶಕ್ತಿ ಇದೆ. ಅದಕ್ಕೋಸ್ಕರವಾಗಿಯೇ ಹುಣ್ಣುಗಳಾದಾಗ ಚಂದನೊಂದಿಗೆ ಕುಂಕುಮ ಮಿಶ್ರನ ಮಾಡಿ ಹಚ್ಚುವರು.

ಇನ್ನು ಗಂಡಸರೂ – ಕುಂಕುಮ, ಚಂದನ, ವಿಭೂತಿ ಗಳನ್ನಿಡುವ ಸಂಪ್ರದಾಯವಿದೆ. ಅದಕ್ಕೆ ಕಾರಣ ಮೇಲೆ ತಿಳಿಸಿರುವಂತೆ ಧ್ಯಾನದಿಂದ ಉಂಟಾಗುವ ಶಕ್ತಿಯನ್ನು ಉಳಿಸಿಕೊಳ್ಳುವುದೂ ಒಂದಾಗಿದೆ. ಹಾಗೇ ಪೂಜೆ ಮಾಡಿ ದೇವರಿಗೆ ಅರ್ಪಿಸಿದ ಕುಂಕುಮವನ್ನೇ ಪ್ರಸಾದವೆಂದು ಇಟ್ಟುಕೊಳ್ಳುವರು.

ಮಲ್ಲೇಶ್ವರಂ ಮತ್ತು ಗಾಂಧಿಬಜಾರಿನಲ್ಲಿ ಗ್ರಂಧಿಗೆ ಅಂಗಡಿಗಳಲ್ಲಿ ಕುಂಕುಮದ ರಾಶಿಯನ್ನು ದೊಡ್ಡ ದೊಡ್ಡ ಬೋಗುಣಿಯಲ್ಲಿ ಚೊಕ್ಕವಾಗಿ ತುಂಬಿಟ್ಟುರುವುದನ್ನು ಕಾಣುವೆವು. ಅದರಲ್ಲೂ ಹಲವಾರು ಬಣ್ಣಗಳಿರುವುವು. ಜಾಸ್ತಿಯಾಗಿ ಉಪಯೋಗಿಸುವುದು ಕೆಂಪು ಬಣ್ಣದ ಕುಂಕುಮ.

ಆಶ್ವಯುಜ ಮಾಸದಲ್ಲಿ ಲಲಿತಾ ಮಾತೆಗೆ ಕುಂಕುಮಾರ್ಚನೆ ಮಾಡಿ ಹತ್ತನೆಯ ದಿನ ಕಲಶ ವಿಸರ್ಜಿಸಿದ ಮೇಲೆ ಅರ್ಚಿಸಿದ ಕುಂಕುಮವನ್ನು ಸಣ್ಣ ಪೊಟ್ಟಣಗಳಾಗಿ ಮಾಡಿ ಪ್ರಸಾದವೆಂದು ಇತರರಿಗೆ ಕೊಡುವ ಸಂಪ್ರದಾಯವೂ ಇದೆ. ನೀವು ಮಾಡುವಿರಾ? ನಮ್ಮ ಮನೆಯಲ್ಲಿ ಹೀಗೆ ಕುಂಕುಮಾರ್ಚನೆ ಮಾಡಿದ ಕುಂಕುಮದ ಒಂದು ದೊಡ್ಡ ಡಬ್ಬಿಯೇ ಇದೆ. ಕುಂಕುಮವನ್ನು ಚೆಲ್ಲಿದರೆ ಅಶುಭ ಅನ್ನುವ ಕಾರಣದಿಂದ ಮನೆಗಳಲ್ಲಿ ಕುಂಕುಮದ ಶೇಖರಣೆ ಜಾಸ್ತಿಯಾಗುತ್ತಲೇ ಇದೆ.

ವಿಭಾಗಗಳು
ಲೇಖನಗಳು

ಬಾಯಿ ಇದ್ದವನಿಗೆ ಬರಗಾಲವಿಲ್ಲ

ಬಾಯಿ ಇದ್ದವನಿಗೆ ಬರಗಾಲವಿಲ್ಲ

ಇದೊಂದು ನಾಡುನುಡಿ (ನಾಣ್ನುಡಿ).  ಇಂದು ಬೆಳಗ್ಗೆ ನನ್ನ ಬಾಸು ನನ್ನನ್ನು ಕರೆದು ಹಳೆಯ ಕೆಲಸವೊಂದು ಬಾಕಿ ಇದ್ದು ಇಂದೇ ಮುಗಿಸಬೇಕೆಂದು ಅಣತಿ ಇತ್ತರು.  ೫ ನಕ್ಷತ್ರಗಳ ಹೊಟೆಲ್ ಒಂದರ ಪಾವತಿಯಲ್ಲಿ ಸ್ವಲ್ಪ ತೊಂದರೆ ಇದ್ದು, ಅಲ್ಲಿಗೆ ಹೋಗಿಯೇ ಇತ್ಯರ್ಥಗೊಳಿಸಬೇಕಿತ್ತು.  ಅದಕ್ಕಾಗಿ ಸಹಾಯಕ ಅಧಿಕಾರಿಯನ್ನು ಕಳುಹಿಸಿದ್ದೆವು.  ಅವರಿಂದ ಕೆಲಸ ಆಗಿರಲಿಲ್ಲ.  ನನಗೇ ಹೋಗಲು ನನ್ನ ಮೇಲಧಿಕಾರಿಗಳು ಅಣತಿ ಇತ್ತರು.  ನಾನೇ ಯಾಕೆ ಹೋಗಬೇಕು, ವಯಸ್ಸಿನಲ್ಲಿ ಹಿರಿಯರಾದ ಸಹಾಯಕ ಅಧಿಕಾರಿಗಳಿಗೇ ಈ ಕೆಲಸ ಆಗ್ಲಿಲ್ಲ ಅಂದ ಮೇಲೆ ನಾನು ಹೋಗಿ ಏನು ಪ್ರಯೋಜನ ಎನ್ನಲು, ಅವರು – ’ನೀನು ಹೋಗಿ ಬಾ.  ಆಮೇಲೆ ನಿನಗೇ ಗೊತ್ತಾಗುತ್ತದೆ, ನಿನ್ನಿಂದ ಈ ಕೆಲಸ ಆಗುವುದೋ ಇಲ್ಲವೋ’ ಎಂದು, ಎಂದು ಹೇಳಿದರು.  ಆ ಹೊಟೆಲ್ ಬಗ್ಗೆ ನನಗೆ ಪರಿಚಯವಿರದ ಕಾರಣ ಸಹಾಯಕ ಅಧಿಕಾರಿಯನ್ನೂ ಜೊತೆಗೆ ಕರೆದೊಯ್ದೆ. 

ಒಬೆರಾಯ್ ಹೊಟೆಲ್‍ನವರ ಸಹೋದರ ಸಂಸ್ಥೆ ಹಿಲ್ಟನ್ ಹೊಟೆಲ್.  ವೈಭವವಾದ ಕಟ್ಟಡದೊಳಗೆ ಕಾಲಿಡುತ್ತಿದ್ದಂತೆಯೇ, ಯಾವುದೋ ಯಕ್ಷ ಲೋಕಕ್ಕೆ ಬಂದಂತಹ ಅನುಭವವಾಯಿತು.   ಆ ಹೊಟೆಲ್ ಒಳಗೆ ಹೋಗುತ್ತಿದ್ದಂತೆಯೇ, ಮೊದಲು ಎದುರಾದದ್ದು ಆತಿಥೇಯ ವಿಭಾಗ.  ನಮ್ಮ ಕೆಲಸ ಆಗಬೇಕಿದ್ದ ಲೆಕ್ಕಪತ್ರದ ವಿಭಾಗ ಎಲ್ಲಿದೆಯೆಂದು ಹುಡುಕುವುದೇ ಒಂದು ದೊಡ್ಡ ಕಷ್ಟವಾಯಿತು. ಹೊಟೆಲ್‍ನ ಹಿಂಭಾಗದಲ್ಲಿರುವ ಗೋಡೌನ್ ತರಹದ ಪ್ರದೇಶದಲ್ಲಿ ಲೆಕ್ಕ ಪತ್ರ ವಿಭಾಗವಿದೆ. ನಮ್ಮ ಕೆಲಸವನ್ನು ನೋಡಿಕೊಳ್ಳುವವರ ಹತ್ತಿರ ಹೋದೆವು.  ನನ್ನ ಸ್ನೇಹಿತರು ನನ್ನನ್ನು ಅವರಿಗೆ ಪರಿಚಯಿಸಿದ ಕೂಡಲೇ, ಅವರು ಎದ್ದು ನಿಂತು ಕುಳಿತುಕೊಳ್ಳಲು ತಿಳಿಸಿ, ತಾವೇನು ಸಹಾಯ ಮಾಡಬಹುದೆಂದು ಕೇಳಿದರು.  ಇಷ್ಟು ಮರ್ಯಾದೆ ಕೊಟ್ಟದ್ದೇ ಸಾಕೆಂದು, ನಾನು ಬಂದ ಕೆಲಸದ ಬಗ್ಗೆ ಉಪನ್ಯಾಸ ಕೊಡಲಾರಂಭಿಸಿದೆ.  ನನ್ನ ಭೈರಿಗೆಯ ಕೊರೆತ ಕೇಳಿಯೇ ಏನೋ, ತಕ್ಷಣ ನಮ್ಮೆಲ್ಲಾ ಮಾತುಗಳಿಗೂ ಒಪ್ಪಿಗೆಯನ್ನು ನೀಡಿದರು.  ನನ್ನ ಕೆಲಸ ಬಹಳ ಸುಲಭದಲ್ಲಿ ಮಿಂಚಿನಂತೆ ಮುಗಿದುಹೋಗಿತ್ತು.  ನಂತರ ನನ್ನ ಸ್ನೇಹಿತರು ತಿಳಿಸಿದ್ದೇನೆಂದರೆ, ನಿರರ್ಗಳವಾಗಿ ನಾನು ಆ ವಿಷಯದ ಬಗ್ಗೆ ಚರ್ಚಿಸುತ್ತಿದ್ದಾಗ, ಹೊಟೆಲ್‍ನ ಆತನಿಗೆ ತಮ್ಮ ತಪ್ಪು ಹಾದಿಯ ಬಗ್ಗೆ ತಿಳುವಳಿಕೆ ಆಯಿತಂತೆ.  ಹಾಗಾಗಿ ಅವರು ನಮ್ಮ ಮಾತುಗಳಿಗೆ ಮಣಿದು, ನಮ್ಮ ನಿಲುವನ್ನು ಸರಿ ಎಂದು ಒಪ್ಪಿಕೊಂಡರಂತೆ.  ಆ ತಕ್ಷಣದಲ್ಲಿ ನನಗೆ ಇದರ ಅನುಭವವೇ ಆಗಿರಲಿಲ್ಲ.  ಅವರಿಂದ ಬೀಳ್ಕೊಂಡು ಹೊರಡುವ ಸಮಯಕ್ಕೆ ಸರಿಯಾಗಿ, ಅವರ ಮೇಲಧಿಕಾರಿಗಳು ಅಲ್ಲಿಗೆ ಬಂದು ನಮ್ಮನ್ನು ಪರಿಚಯಿಸಿಕೊಂಡು ತಮ್ಮಲ್ಲಿಗೆ ಊಟಕ್ಕೆ ಬರಬೇಕೆಂದು ಆಹ್ವಾನಿಸಿದರು.  ನಾನು ಹೊರಗಡೆ ಎಲ್ಲಿಯೂ ಏನನ್ನೂ ತಿನ್ನುವುದಿಲ್ಲವೆಂದು ಹೇಳಲು, ಅವರಿಗೆ ಅತಿಯಾದ ಆಶ್ಚರ್ಯವಾಯಿತು.  ಅದೇ ನನ್ನ ಸ್ನೇಹಿತರು, ಅವರೊಂದಿಗೆ ಹೊರಟು ನಿಂತರು.  ಬಹಳ ಒಳ್ಳೆಯ ಊಟ ನೀಡಿದ್ದರಂತೆ.  ನಂತರ ನಾನು ಬ್ಯಾಂಕಿಗೆ ಬಂದು ಕೆಲಸವಾದುದರ ಬಗ್ಗೆ ಹೇಳಿದ ಕೂಡಲೇ ನನ್ನ ಮೇಲಧಿಕಾರಿ ಹೇಳಿದರು, ’ನಾನು ಮೊದಲೇ ಹೇಳಿರಲಿಲ್ವೇ?  ನೀನು ಹೋದರೆ ಕೆಲಸ ಖಂಡಿತವಾಗಿ ಆಗುವುದು ಎಂದು’.   ತಕ್ಷಣ ನನಗೆ ನೆನಪಾದದ್ದು ‘ಬಾಯಿಯಿದ್ದವನು ಬರಗಾಲದಲ್ಲಿಯೂ ಬದುಕಿಯಾನು’ ಎಂದ ಕನ್ನಡದ ನಾಣ್ನುಡಿ. 

ಇದೇ ಸಂದರ್ಭದಲ್ಲಿ ನನ್ನ ಹಳೆಯ ಒಂದು ನೆನಪನ್ನು ಕೆದಕಿ ನಿಮ್ಮ ಮುಂದಿಡುತ್ತಿರುವೆ.  ನನ್ನ ತಂದೆ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಹೋರಾಡಿದ್ದವರು. ಹಾಗಾಗಿ ಅವರಿಗೆ ಸರಕಾರದಿಂದ ಪಿಂಚಣಿ ಬರುತ್ತಿದ್ದಂತೆಯೇ ನನಗೂ ಕಾಲೇಜಿನ ಫೀ ಮಾಫಿ, ಹಾಸ್ಟೆಲಿನ ಖರ್ಚು, ಪುಸ್ತಿಕೆಗಳ ಖರ್ಚು ಇತ್ಯಾದಿ ಎಂದು ಸ್ಕಾಲರ್ ಶಿಪ್ ಬರುತ್ತಿತ್ತು. ೧೯೭೯-೮೦ರಲ್ಲಿ ಬಿ.ಕಾಂ ಕೊನೆಯ ವರ್ಷದಲ್ಲಿ ಓದುತ್ತಿದ್ದ ಸಮಯ.    ಪದವಿಯ ಎರಡನೆಯ ವರ್ಷದಲ್ಲಿ ಅರ್ಜಿ ಸಲ್ಲಿಸಿದ ಹಣ ಯಾಕೋ ಇನ್ನೂ ಬಂದಿರಲಿಲ್ಲ.  ಮೂರನೆಯ (ಕಡೆಯ) ವರ್ಷದ ಅರ್ಜಿಯನ್ನು ಸಲ್ಲಿಸಿದ ಸ್ವಲ್ಪ ದಿನಗಳಲ್ಲಿಯೇ, ಅದರ ಬಾಬ್ತು ಹಣ ಬಂದಿತ್ತು.  ಈ ಮೊದಲು ಮೊದಲ ವರ್ಷದ ಬಾಬ್ತು ಕೂಡಾ ಸರಿಯಾದ ಸಮಯಕ್ಕೆ ಬಂದಿತ್ತು. ಎರಡನೆಯ ವರ್ಷದ ಹಣ ಮಾತ್ರ ಏಕೆ ಬಂದಿಲ್ಲ ಎಂದು ಕಾಲೇಜಿನ ಸಿಬ್ಬಂದಿಗಳಲ್ಲಿ ವಿಚಾರಿಸಲು, ಸರ್ಕಾರದ ಆ ವಿಭಾಗಕ್ಕೇ ಹೋಗಿ ವಿಚಾರಿಸು ಎಂದಿದ್ದರು.  ಒಂದು ದಿನ ಆ ವಿಭಾಗಕ್ಕೆ ಹೋಗಿ ವಿಚಾರಿಸಲು, ಕಿರಿಯ ಅಧಿಕಾರಿಗಳು ತಮಗೇನೂ ಗೊತ್ತಿಲ್ಲ,  ನಿನಗೆ ಎಷ್ಟು ಬಂದಿದೆಯೋ ಅದರಲ್ಲೇ ಸಂತೋಷಪಟ್ಟುಕೋ ಎಂದಿದ್ದರು.  ಸುಮ್ಮನಿರದ ನಾನು ಪಕ್ಕದಲ್ಲಿಯೇ ಪ್ರತ್ಯೇಕ ಕೊಠಡಿಯಲ್ಲಿದ್ದ ಹಿರಿಯ ಅಧಿಕಾರಿಗಳ ಬಳಿ ಹೋಗಿ ನನ್ನ ಅಳಲನ್ನು ತೋಡಿಕೊಂಡೆ.  ನನ್ನ ತಂದೆ ಸ್ವಾತಂತ್ರ್ಯ ಯೋಧರು.  ಈಗ ಅವರು ಕೆಲಸದಿಂದ ನಿವೃತ್ತರಾಗಿರುವುದರಿಂದ ಮತ್ತು ನಾನು ವಸತಿನಿಲಯದಲ್ಲಿದ್ದು ಓದುತ್ತಿರುವುದರಿಂದ, ಜೀವನ ನಡೆಸುವುದು ಸ್ವಲ್ಪ ದುಸ್ತರವಾಗಿದೆ ಎಂದಿದ್ದೆ.  ಅಷ್ಟಲ್ಲದೇ ನಾನು ಕೊಂಡು ಹೋಗಿದ್ದ ನನ್ನ ಹಳೆಯ ಅಂಕಪಟ್ಟಿಗಳೆಲ್ಲವನ್ನೂ ಅವರ ಮುಂದಿಟ್ಟಿದ್ದೆ.  ಅದನ್ನು ನೋಡಿಯೋ ಏನೋ, ಆ ಹಿರಿಯ ಅಧಿಕಾರಿಗಳು, ಅರ್ಜಿ ತಮಗೆ ಬಂದಿಲ್ಲವೆಂದೂ ಮತ್ತೊಂದು ಅರ್ಜಿ ಸಲ್ಲಿಸಿದರೆ ತಕ್ಷಣವೇ ಮಂಜೂರು ಮಾಡಿ ಹಣ ಸಂದಾಯಿಸುವುದಾಗಿಯೂ ಹೇಳಿದ್ದರು.  ಅಲ್ಲಿಯೇ ಕುಳಿತು ಸ್ಕಾಲರ್‌ಶಿಪ್‍ಗಾಗಿ ಇನ್ನೊಂದು ಅರ್ಜಿಯನ್ನು ಸಲ್ಲಿಸಿದೆ.  ಅದಾದ ನಂತರ ಸ್ವಲ್ಪ ಕಾಲ ಆ ವಿಷಯವೇ ನನಗೆ ಮರೆತು ಹೋಗಿತ್ತು. ಬಿ.ಕಾಂ ಪದವಿ ದೊರೆತ ಸ್ವಲ್ಪ ದಿನಗಳ ಮೇಲೆ, ಒಮ್ಮೆ ಕಾಲೇಜಿನಿಂದ ಕರೆ ಬಂದಿತು.  ಅಲ್ಲಿಗೆ ಹೋಗುತ್ತಿದ್ದಂತೆಯೇ ಕಾಲೇಜಿನ ಲೆಕ್ಕಾಧಿಕಾರಿಗಳು, ನಿನಗೆ ಚೆಕ್ ಕೊಡಬೇಕೋ ಅಥವಾ ನಗದು ಹಣ ಕೊಡಬೇಕೋ ಎಂದು ಕೇಳಿದರು.  ವಿಷಯವೇನೆಂದು ತಿಳಿಯದ ನಾನು, ಯಾವುದರ ಬಗ್ಗೆ ಕೇಳ್ತಿದ್ದೀರಿ, ನನಗೆ ನಗದು ಹಣ ಕೊಟ್ಟರೇ ಒಳ್ಳೆಯದು ಎಂದು ಹೇಳಿದೆ.  ಒಟ್ಟಿಗೆ ಎರಡು ವರ್ಷಗಳ ಸ್ಕಾಲರ್‌ಶಿಪ್ ಹಣವನ್ನು ನಗದಾಗಿ ಕೊಟ್ಟರು.  ನನಗೆ ಸಖೇದಾಶ್ಚರ್ಯವಾಯಿತು.  ಒಂದು ವರ್ಷದ್ದೇ ಸರಿಯಾಗಿ ಬರದಿದ್ದ ಸಮಯದಲ್ಲಿ ಎರಡು ವರ್ಷಗಳ ಹಣ ಅದು ಹೇಗೆ ಬಂದಿತು ಎಂದು.  ಲೆಕ್ಕಾಧಿಕಾರಿಗಳು ವಯಸ್ಸಿನಲ್ಲಿ ಬಹಳ ಹಿರಿಯರಾಗಿದ್ದರು.  ಅವರನ್ನು ಈ ಬಗ್ಗೆ ಕೇಳಿದೆ. ಅದಕ್ಕವರು, ನೀನು ಸರ್ಕಾರದ ಕಛೇರಿಗೆ ಹೋಗಿದ್ದೆಯಾ?  ಅಲ್ಲಿ ಏನು ನಡೆಯಿತು ಹೇಳು?  ಎಂದು ಹೇಳಿದರು.  ಅಲ್ಲಿ ನಡೆದ ಎಲ್ಲ ವಿಷಯಗಳನ್ನೂ ಚಾಚೂ ತಪ್ಪದೇ ಅವರ ಮುಂದೆ ಹರಿಯಬಿಟ್ಟೆ.  ಅದಕ್ಕವರು, ‘ನೋಡಿದೆಯಾ, ಇದಕ್ಕೇ ಹೇಳುವುದು, ಬಾಯಿ ಇದ್ದವನಿಗೆ ಬರಗಾಲವಿಲ್ಲ’.  ನೀನು ಹಿರಿಯ ಅಧಿಕಾರಿಗಳನ್ನು ಕಂಡುದುದು, ಅಂಕ ಪಟ್ಟಿಯನ್ನು ತೋರಿಸಿದುದು, ಇನ್ನೊಂದು ಅರ್ಜಿಯನ್ನು ಸಲ್ಲಿಸಿದುದು ಒಳ್ಳೆಯದೇ ಆಯಿತು.  ನೋಡು ಅವರೀಗ ಹಳೆಯ ಅರ್ಜಿಯನ್ನೂ ತೆಗೆಸಿ, ಎರಡನ್ನೂ ಮಂಜೂರು ಮಾಡಿ ಕಳುಹಿಸಿದ್ದಾರೆ.  ಒಂದು ವರ್ಷದ ಹಣ ಜಾಸ್ತಿಯಾಗಿಯೇ ಬಂದಿದೆ ಎಂದು ಯಾರಲ್ಲಿಯೂ ಹೇಳಬೇಡ. ಹಿಂದೊಮ್ಮೆ ಮೊದಲ ಪಿಯುಸಿಯಲ್ಲಿ ಸ್ಕಾಲರ್ ಶಿಪ್ ಬಂದಿರಲಿಲ್ಲ.  ದೇವರು ಕೊಟ್ಟ ವರವೆಂದು ಕಣ್ಣಿಗೊತ್ತಿಕೊಂಡು ತೆಗೆದುಕೋ.  ನಿನಗೆ ಬದುಕಿನಲ್ಲಿ ಒಳ್ಳೆಯದೇ ಆಗುವುದು ಎಂದು ಹರಸಿದರು. ಆ ಹಿರಿಯರಿಗೆ ಅಲ್ಲಿಯೇ ಸಾಷ್ಟಾಂಗ ನಮಸ್ಕಾರಗಳನ್ನು ಸಲ್ಲಿಸಿದೆ.  ಈಗವರು ಎಲ್ಲಿಹರೋ ಏನೋ ತಿಳಿಯದು. ಆದರೆ ಅವರ ಆತ್ಮ ಮಾತ್ರ ನನ್ನನ್ನು ಹರಸುತ್ತಲೇ ಇದೆ.  ಅವರ ಇಂತಹ ಮಾತುಗಳನ್ನು ಮರೆಯಲಾಗುವುದೇ? ನನ್ನ ಜೀವನದಲ್ಲಿ ಕಂಡ ಎಂದುರೋ ಮಹಾನುಭಾವುಲುಗಳಲ್ಲಿ ಅವರೂ ಒಬ್ಬರು.