ಸ್ವಹಿತದೆಡೆಗೇ ಮನ

kogile

ಮತ್ತೆ ವಸಂತನಾಗಮನ
ಮತ್ತೆ ಮತ್ತೆ ತರು ಲತೆಗಳಲಿ ನವ ಚೇತನ
ನೇಸರನ ತೀಕ್ಷಣತೆಗೆ ಒತ್ತು ಕೊಡುವ ಕಾಲ
ಬರುತಿದೆ ನೀರಿಗಾಗಿ ಬಾಯಿ ಬಿಡುವ ದಿನ

ಮೇಲೇರುತಿದೆ ಉರಿ ಬಿಸಿಲು
ಕಾಲ್ಕೆಳಗೆ ಸುಡು ಕಲ್ನಾರು
ಮರ ಒಣಗಿದರೇನು
ಗಿಡ ಚಿಗುರಿದರೇನು

ಇಂದಿನ ಹಸಿವು ತಣಿಸಬೇಕು
ಮಕ್ಕಳ ನಾಳೆ ಸುಗಮವಾಗಿರಿಸಿರಬೇಕು
ಇದೇ ನನ್ನ ಹಂಬಲ
ಇದಕಾಗೇ ನನ್ನ ಚಿಂತನೆ

ಒಮ್ಮೆ ಕೂಗಿದೆ ನಾನು
ಮಗು ಬೀಳುತಿರಲು,
ಅದ ಹಾಡೆಂದರು
ತಾವು ನಲಿದರು :(

ಹಸಿವಲಿ ನರಳಿದೆ
ಅದನರ್ಥ ಮಾಡಿಕೊಳ್ಳದವರು
ಅದನೂ ಹಾಡೆಂದರು
ಕಥೆ ಕವನ ಕಟ್ಟಿದರು

ಕವಿಯಂತೆ ಮನ ಓಡಿಸಿದರು
ಕಪಿಯಂತೆ ಮರದೆಡೆಗೆ ನೋಟವಿಟ್ಟರು
ನನ್ನಿಂದ ಇನ್ನೂ ಹೆಚ್ಚು ಅಪೇಕ್ಷಿಸಿದರು
ಎನ್ನ ತಿಳಿಯದಾದರು
ತಿಳಿಯಲು ಇಚ್ಛೆಯೂ ಇಲ್ಲದವರು
ತಮ್ಮ ಸಂತಸವೇ ಮಿಗಿಲೆಂದವರು

ನನ್ನಳಲು ನನಗೇ ಗೊತ್ತು
ಮೂಢರಿಗೇನು ತಿಳಿದೀತು!
ನನ್ನ ಸ್ನೇಹಿತೆ ಕಾಗೆಯ
ವೈರಿ ಎಂದರು, ಎನ್ನ ಹೊನ್ನಶೂಲಕೇರಿಸಿದರು

ನಿಮಗೇನು ಗೊತ್ತು? ಹೇಗೆ ತಾನೆ ಗೊತ್ತಾಗಬೇಕು
ನಾನೇನೇ ಉಲಿದರೂ ಹಾಡೆಂದು ಅರ್ಥೈಸುವಿರಿ

ಪ್ರತಿಕ್ರಿಯೆಗಳು ಬರಲಿ, ಬಾರದಿರಲಿ, ಮನ ಮುದುಡಿಸಿಕೊಳ್ಳದೆಯೇ, ವಾರಕ್ಕೊಂದರಂತೆ ಶತಕ ಚಿತ್ರಗಳನ್ನು ಇತ್ತು, ಅನಿಸಿಕೆಗಳನ್ನು ಮೂಡಿಸಲು ಹಲವು ಮನಗಳಿಗೆ ಅನುವು ಮಾಡಿ ಕೊಟ್ಟ ಅಮರ, ಶ್ರೀ ಮತ್ತು ಶ್ರೀನಿಧಿಯವರುಗಳಿಗೆ ಮನಃಪೂರ್ವಕ ಕೃತಜ್ಞತೆಗಳು

1 Comment

  1. Dr. Azad said,

    June 9, 2009 at 11:52 pm

    ಹಸಿವಲಿ ನರಳಿದೆ
    ಅದನರ್ಥ ಮಾಡಿಕೊಳ್ಳದವರು
    ಅದನೂ ಹಾಡೆಂದರು
    ಕಥೆ ಕವನ ಕಟ್ಟಿದರು
    ಪ್ರಸಿದ್ಧನಾಮರಿಗೆ privacy ಇರೊಲ್ಲವಂತೆ..ಇದೇ ಗೋಳು ಕೋಗಿಲೆಗೂ ಕಾಡಿದ್ದು ಮತ್ತು ಅದರ ಕಷ್ಟದಲ್ಲೂ ನಮ್ಮ ಇಷ್ಟವನ್ನು ಕಾಣುವುದು ಮನುಜ ಗುಣವೆಂದೂ..ಬಹು ಅರ್ಥಪೂರ್ಣ ಸಾಲುಗಳ ಮೂಲಕ ಚಿತ್ರಕ್ಕೆ ಬಿಂಬವನ್ನು ನೀಡಿದ್ದೀರಿ…ಈ ಸ್ಥರದ ಯೋಚನೆಗಳು ನಮಗೆ ಹತ್ತಿರವೂ ಸುಳಿಯುವುದಿಲ್ಲ ..ಇದರಲ್ಲಿ ಶೇ.ಒಂದು ಬಂದರೂ ಸಾರ್ಥಕ…ಧನ್ಯವಾದಗಳು…ಸರ್


Post a Comment